
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ವ್ಯಕ್ತಿತ್ವ ದೊಡ್ಡದು. ಆಕೆಯ ತ್ಯಾಗ, ಹೋರಾಟಗಳು ಮಹಿಳೆಯರಿಗೆ ಮಾದರಿ. ಸವಾಲುಗಳನ್ನು ಮೆಟ್ಟಿ ನಿಂತು ಉದ್ಯಮ ಕಟ್ಟಿರುವ ಮಹಿಳಾ ಉದ್ಯಮಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಎಫ್ಕೆಸಿಸಿಐ ಸಭಾಂಗಣದಲ್ಲಿ ಉಬುಂಟು ಸಂಸ್ಥೆಯ ‘ಒಗ್ಗಟ್ಟಾಗಿ ಬೆಳೆಯೋಣ’ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆಯ 5ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅಗ್ರಸ್ಥಾನವಿದೆ. ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದ್ದು, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ನನಗೆ ಯುವ ಸಮೂಹ ಮತ್ತು ಮಹಿಳೆಯರ ಶಕ್ತಿಯ ಮೇಲೆ ಅಪಾರ ವಿಶ್ವಾಸವಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಹೆಚ್ಚಿಸಿವೆ. ಗೃಹಲಕ್ಷ್ಮಿ ಯೋಜನೆಯಡಿ 1.22 ಕೋಟಿ ಮಹಿಳೆಯರಿಗೆ ಮಾಸಿಕ ₹2 ಸಾವಿರ ನೆರವು ನೀಡಲಾಗುತ್ತಿದ್ದು, ಇದು ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮಹಿಳೆಯರು ಅಡುಗೆಮನೆಗೆ ಮಾತ್ರ ಸೀಮಿತರಲ್ಲ. ಅವರು ಉತ್ತಮ ಚಿಂತಕರು, ಉದ್ಯಮಿಗಳು ಹಾಗೂ ಉದ್ಯೋಗದಾತರಾಗಿದ್ದಾರೆ. ಆರ್ಥಿಕ ಸವಾಲುಗಳನ್ನು ಮೆಟ್ಟಿ ಉದ್ಯಮಗಳನ್ನು ಮುನ್ನಡೆಸುತ್ತಿರುವ ಮಹಿಳೆಯರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಮಹಿಳಾ ಮೀಸಲಾತಿಯನ್ನು ಪಕ್ಷಾತೀತವಾಗಿ ಒಪ್ಪಿಕೊಂಡಿದ್ದು, ಶೇ.33ರಷ್ಟು ಮೀಸಲಾತಿಯಿಂದ ಮಹಿಳೆಯರು ನಾಯಕತ್ವ ವಹಿಸುವ ಅವಕಾಶ ಮತ್ತಷ್ಟು ಹೆಚ್ಚಲಿದೆ. ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದಿಂದ ನಾಯಕರಾಗಬೇಕು ಎಂದು ಕರೆ ನೀಡಿದರು.
ಟನೆಲ್ ಯೋಜನೆಗೆ ಉದ್ಯಮಿಗಳು ಬೆಂಬಲ ನೀಡಲಿ
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಿರುವ ಸುರಂಗ ಮಾರ್ಗ ಯೋಜನೆಗೆ ರಾಜಕೀಯ ಕಾರಣಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆಯಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಹೀಗಾಗಿ ಉದ್ಯಮಿಗಳು ಯೋಜನೆಯ ಪರವಾಗಿ ಧ್ವನಿ ಎತ್ತಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಸಂಚಾರ ಮೂಲಸೌಕರ್ಯ ಬಲಪಡಿಸಲು ಸರ್ಕಾರ ₹1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಪಥದಲ್ಲಿ ಮಹಿಳಾ ಉದ್ಯಮಿಗಳು ಪಾಲುದಾರರಾಗಬೇಕು. ಒಗ್ಗಟ್ಟಿನಿಂದ ಕೆಲಸ ಮಾಡುವುದೇ ಯಶಸ್ಸಿನ ದಾರಿ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.