
ವಡ್ನಗರ್ (ಗುಜರಾತ್),17 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಶುಭಾಶಯ ಕೋರಿದ್ದು, ‘ಮೋದಿ ಅವರ ಜೀವನ ದೇಶಕ್ಕೆ ಪ್ರೇರಣೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಜನ್ಮಸ್ಥಳ ವಡನಗರದಲ್ಲಿ ಗುರುವಾರದಿಂದ ಎರಡು ದಿನಗಳ ಜನ್ಮದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಧಾನಿಯವರ 25 ವರ್ಷಗಳ ಸಾರ್ವಜನಿಕ ಜೀವನ ಹಾಗೂ ಸೇವಾ ಸಂಕಲ್ಪಕ್ಕೆ ಸಮರ್ಪಿತ ವಿವಿಧ ಕಾರ್ಯಕ್ರಮಗಳಿಂದ ವಡನಗರದಲ್ಲಿ ವಿಶೇಷ ವಾತಾವರಣ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ನಾಲ್ಕು ಪವಿತ್ರ ಸ್ಥಳಗಳಿಂದ ಬುಧವಾರ ಬೈಕ್ ಯಾತ್ರೆಗಳು ವಡನಗರ ತಲುಪಿದವು. ಯಾತ್ರೆಯ ವೇಳೆ ವಿವಿಧ ಪವಿತ್ರ ನದಿಗಳ ಜಲವನ್ನು ಸಂಗ್ರಹಿಸಿ ವಡನಗರಕ್ಕೆ ತರಲಾಯಿತು. ಬಳಿಕ ಯಾತ್ರಿಕರು ಹಾಟಕೇಶ್ವರ ಮಹಾದೇವ ದೇವಸ್ಥಾನಕ್ಕೆ ತೆರಳಿ ದೇವರಿಗೆ ಜಲಾಭಿಷೇಕ ನೆರವೇರಿಸಿದರು. ಜಲಾಭಿಷೇಕದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಶರ್ಮಿಷ್ಠಾ ಕೆರೆಯಲ್ಲಿ ಮಹಾ ಆರತಿ ನೆರವೇರಿಸಲಾಯಿತು.
ಪ್ರಧಾನಿ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಜನ್ಮಸ್ಥಳ ವಡನಗರಕ್ಕೆ ಆಗಮಿಸಿರುವುದು ತಮ್ಮ ಸೌಭಾಗ್ಯ ಎಂದು ಅಮಿತ್ ಶಾ ಹೇಳಿದರು. ಹಾಟಕೇಶ್ವರ ಮಹಾದೇವನ ಸನ್ನಿಧಿಯಲ್ಲಿ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸೇವೆ ದೇಶದ ಸಾರ್ವಜನಿಕ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿರುವವರು ಪ್ರಧಾನಿಯವರ ಸೇವಾ ಜೀವನದ ಸಂದೇಶವನ್ನು ದೇಶದ ಜನರಿಗೆ ತಲುಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬ ಯುವಕನೂ ಮೋದಿ ಜೀವನ ತಿಳಿಯಬೇಕು
ಕೆಲವರು ವಂಶಪಾರಂಪರ್ಯ ರಾಜಕಾರಣಕ್ಕೆ ಸಂಬಂಧಿಸಿದವರಾಗಿದ್ದು, ಅಂತಹವರಿಗೆ ನರೇಂದ್ರ ಮೋದಿ ಅವರ ಜೀವನವನ್ನು ತಿಳಿದುಕೊಳ್ಳುವುದು ಏಕೆ ಅಗತ್ಯ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಅಮಿತ್ ಶಾ ಹೇಳಿದರು. ಆದರೆ ಮೋದಿ ಅವರ ಜೀವನ ದೇಶದ ಪ್ರತಿಯೊಬ್ಬ ಮಗು, ಹದಿಹರೆಯದವರು ಹಾಗೂ ಯುವಕರು ತಿಳಿದುಕೊಳ್ಳಬೇಕಾದಂತಹದ್ದು ಎಂದರು.
ಪ್ರಧಾನಿ ಮೋದಿ ಅವರು ದೀರ್ಘಕಾಲ ನಿರಂತರವಾಗಿ ಜನಸೇವೆ ಸಲ್ಲಿಸುವ ಮೂಲಕ ವಿವಿಧ ಚುನಾವಣೆಗಳಲ್ಲಿ ಜನರ ವಿಶ್ವಾಸ ಹಾಗೂ ಆಶೀರ್ವಾದ ಗಳಿಸಿದ್ದಾರೆ. ಅವರ ಜೀವನ ಸಾರ್ವಜನಿಕ ಸೇವೆ ಮತ್ತು ಸಂಘಟನೆಗೆ ಸಮರ್ಪಣೆಯ ಉದಾಹರಣೆಯಾಗಿದೆ ಎಂದು ಹೇಳಿದರು.
ಶರ್ಮಿಷ್ಠಾ ಕೆರೆಗೆ ಸಂಬಂಧಿಸಿದ ಐತಿಹ್ಯ
ವಡನಗರದ ಐತಿಹಾಸಿಕ ಶರ್ಮಿಷ್ಠಾ ಕೆರೆಗೆ ಸಂಬಂಧಿಸಿದ ಐತಿಹ್ಯವನ್ನೂ ಅಮಿತ್ ಶಾ ವಿವರಿಸಿದರು. ನರಸಿಂಹ ಮೆಹ್ತಾ ಅವರ ಪುತ್ರಿ ಕುಂವರಬಾಯಿ ಅವರ ಪುತ್ರಿ ಶರ್ಮಿಷ್ಠಾ ಅವರ ವಿವಾಹ ವಡನಗರದ ಝಟಪಟ್ ಮೆಹ್ತಾ ಅವರೊಂದಿಗೆ ನಡೆದಿತ್ತು. ಈ ಪ್ರದೇಶದಲ್ಲಿ ಬರ ಉಂಟಾದ ಸಂದರ್ಭದಲ್ಲಿ ಕೆರೆ ನಿರ್ಮಿಸಿಕೊಡುವಂತೆ ಅಲ್ಲಿನ ರಾಜನಿಗೆ ಮನವಿ ಮಾಡಲಾಗಿತ್ತು. ಇದರಿಂದಲೇ ಕೆರೆಗೆ ಶರ್ಮಿಷ್ಠಾ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ವಡನಗರ ಹಾಗೂ ಪ್ರಧಾನಿ ಮೋದಿ ಅವರ ಬಾಲ್ಯದ ದಿನಗಳಿಗೆ ಸಂಬಂಧಿಸಿದ ಹಲವು ಪ್ರಸಂಗಗಳನ್ನು ಉಲ್ಲೇಖಿಸಿದ ಅವರು, ಹಾಟಕೇಶ್ವರ ಮಹಾದೇವ ದೇವಸ್ಥಾನ ಮತ್ತು ಶರ್ಮಿಷ್ಠಾ ಕೆರೆಗಳು ಪ್ರಧಾನಿ ಮೋದಿ ಅವರ ಜೀವನದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಪ್ರಮುಖ ಸ್ಥಳಗಳಾಗಿವೆ ಎಂದರು.
25 ವರ್ಷಗಳ ಸೇವೆಗೆ ಸಮರ್ಪಿತ ಯಾತ್ರೆ
ಪ್ರಧಾನಿ ಮೋದಿ ಅವರ ಜನ್ಮದಿನ ಹಾಗೂ ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಡನಗರದಲ್ಲಿ ನಡೆದ ಯಾತ್ರೆಗಳ ಮೂಲಕ ಸೇವೆ, ಸಮರ್ಪಣೆ ಮತ್ತು ಜನಸಂಪರ್ಕದ ಸಂದೇಶವನ್ನು ಜನರಿಗೆ ತಲುಪಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯವಂತರಾಗಿ ದೀರ್ಘಾಯುಷ್ಯ ಹೊಂದಲಿ ಎಂದು ಹಾರೈಸಿದ ಅಮಿತ್ ಶಾ, ಅವರ ಸಾರ್ವಜನಿಕ ಜೀವನ ದೇಶಕ್ಕೆ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲೂ ಅವರ ಅನುಭವ ಹಾಗೂ ಮಾರ್ಗದರ್ಶನ ದೇಶಕ್ಕೆ ಉಪಯುಕ್ತವಾಗಲಿದೆ ಎಂದು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.