
ಸಿಬ್ಸಾಗರ್ (ಅಸ್ಸಾಂ), 05 ಆಗಸ್ಟ್ (ಹಿ.ಸ.):
ಆ್ಯಂಕರ್:ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಅಸ್ಸಾಂನ ಶಿವಸಾಗರ್ ಜಿಲ್ಲೆಯ ನೆರೆಪೀಡಿತ ಸಂತಕ್ ಮತ್ತು ನೇಪಾಳಿ ಖೂಂಟಿ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
ನೆರೆಪೀಡಿತ ಕುಟುಂಬಗಳನ್ನು ಭೇಟಿ ಮಾಡಿದ ನಡ್ಡಾ, ಮನೆಗಳು, ಕೃಷಿಭೂಮಿ, ಜಾನುವಾರುಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ಉಂಟಾದ ಹಾನಿಯ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಪ್ರಗತಿಯನ್ನೂ ಪರಿಶೀಲಿಸಿದರು.
ಅಗತ್ಯ ಪರಿಹಾರ ಸಾಮಗ್ರಿಗಳ ಲಭ್ಯತೆ ಹಾಗೂ ಸ್ಥಳಾಂತರಗೊಂಡ ಕುಟುಂಬಗಳಿಗೆ ನೀಡಲಾಗುತ್ತಿರುವ ನೆರವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸರ್ಕಾರ ನೆರೆ ಸಂತ್ರಸ್ತರ ನೆರವಿಗೆ ಸಂಪೂರ್ಣ ಬದ್ಧವಾಗಿದ್ದು, ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಂತಕ್ ಮತ್ತು ನೇಪಾಳಿ ಖೂಂಟಿ ಶಿವಸಾಗರ್ ಜಿಲ್ಲೆಯ ಅತಿ ಹೆಚ್ಚು ನೆರೆ ಬಾಧಿತ ಪ್ರದೇಶಗಳಾಗಿದ್ದು, ಇತ್ತೀಚಿನ ಪ್ರವಾಹದಿಂದ ಸಾವಿರಾರು ಜನರ ಜೀವನ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಅನೇಕ ಮನೆಗಳು, ಗೃಹೋಪಯೋಗಿ ವಸ್ತುಗಳು ನಾಶವಾಗಿದ್ದು, ರಸ್ತೆಗಳು, ತಟಬಂಧಗಳು ಹಾಗೂ ವ್ಯಾಪಕ ಕೃಷಿಭೂಮಿಗೂ ಹಾನಿಯಾಗಿದೆ.
ಅಸ್ಸಾಂ ಸರ್ಕಾರ ಹಾಗೂ ಜಿಲ್ಲಾಡಳಿತ ಹಾನಿಯ ಮೌಲ್ಯಮಾಪನ, ತುರ್ತು ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಂಡಿರುವ ನಡುವೆಯೇ ನಡ್ಡಾ ಅವರ ಈ ಭೇಟಿ ಮಹತ್ವ ಪಡೆದಿದೆ. ಇದು ಮೇಲ್ಅಸ್ಸಾಂ, ವಿಶೇಷವಾಗಿ ಶಿವಸಾಗರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನೆರೆ ಪರಿಸ್ಥಿತಿಯ ಕೇಂದ್ರ ಸರ್ಕಾರದ ಪರಿಶೀಲನೆಯ ಭಾಗವಾಗಿದೆ.
ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವ ಶರ್ಮಾ, ಸಚಿವರಾದ ಅಶೋಕ್ ಸಿಂಘಲ್, ಕೇಶವ್ ಮಹಂತ್, ಪಿಯೂಷ್ ಹಜಾರಿಕಾ, ಸುಶಾಂತ್ ಬೊರ್ಗೊಹೈನ್, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.