ರಾಹುಲ್ ಗಾಂಧಿ ಹಿಂದೂ ಧರ್ಮಶಾಸ್ತ್ರ ವಿರೋಧಿ ಮನೋಭಾವ, ಅಸತ್ಯ ಪ್ರಚಾರ ಬಿಡಲಿ: ಅವಿಮುಕ್ತೇಶ್ವರಾನಂದ ಸರಸ್ವತಿ
ಜೋಶಿಮಠ, 25 ಆಗಸ್ಟ್ (ಹಿ.ಸ.): ಆ್ಯಂಕರ್:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮನುಸ್ಮೃತಿ ಕುರಿತು ನೀಡಿರುವ ಹೇಳಿಕೆಗಳಿಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮಶಾಸ್ತ್ರಗಳ ಕುರಿತು ಮಾತನಾಡುವ ಮುನ್ನ ಅವುಗಳನ್ನು
ज्योतिर्मठ के शंकराचार्य स्वामी अविमुक्तेश्वरानंद सरस्वती फायल चित्र।


ಜೋಶಿಮಠ, 25 ಆಗಸ್ಟ್ (ಹಿ.ಸ.):

ಆ್ಯಂಕರ್:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮನುಸ್ಮೃತಿ ಕುರಿತು ನೀಡಿರುವ ಹೇಳಿಕೆಗಳಿಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮಶಾಸ್ತ್ರಗಳ ಕುರಿತು ಮಾತನಾಡುವ ಮುನ್ನ ಅವುಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿ, ಶಾಸ್ತ್ರೀಯ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಶಂಕರಾಚಾರ್ಯರು, ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಮನುಸ್ಮೃತಿ ಹಾಗೂ ಸನಾತನ ಸಾಂಸ್ಕೃತಿಕ ವಿಚಾರಗಳ ಕುರಿತು ನೀಡಿದ ಹೇಳಿಕೆಗಳು ಧರ್ಮಶಾಸ್ತ್ರಗಳ ಮೇಲ್ನೋಟದ ತಿಳಿವಳಿಕೆಯನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ. ಸಂಸತ್ತು ಸೇರಿದಂತೆ ಸಾರ್ವಜನಿಕ ವೇದಿಕೆಗಳಲ್ಲಿ ಮನುಸ್ಮೃತಿ ಮತ್ತು ಧರ್ಮಶಾಸ್ತ್ರಗಳ ಕುರಿತು ಪದೇಪದೇ ಅಸತ್ಯ ಹಾಗೂ ದಾರಿ ತಪ್ಪಿಸುವ ಪ್ರಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳು ಬೇರೆ ವಿಚಾರ. ಆದರೆ ಧರ್ಮ ಮತ್ತು ಶಾಸ್ತ್ರಗಳ ಕುರಿತು ಮಾತನಾಡುವಾಗ ವಾಸ್ತವಾಂಶ, ಸಂದರ್ಭ ಹಾಗೂ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಅಧಿಕೃತ ಮೂಲಗಳು ಮತ್ತು ವಿದ್ವಾಂಸರ ಮೂಲಕ ಹಿಂದೂ ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಿದ ಬಳಿಕವೇ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಅವರು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

ಮನುಸ್ಮೃತಿ ಸೇರಿದಂತೆ ಹಿಂದೂ ಧರ್ಮಶಾಸ್ತ್ರಗಳ ಕುರಿತು ಸಮಾಜದಲ್ಲಿ ವಿಭಿನ್ನ ಅಭಿಪ್ರಾಯಗಳು ಮತ್ತು ವ್ಯಾಖ್ಯಾನಗಳಿವೆ. ಹೀಗಾಗಿ ಯಾವುದೇ ಗ್ರಂಥದ ಬಗ್ಗೆ ಏಕಪಕ್ಷೀಯ ಅಭಿಪ್ರಾಯ ವ್ಯಕ್ತಪಡಿಸುವ ಬದಲು ಅದರ ಮೂಲ ಸ್ವರೂಪ, ಸಂದರ್ಭ, ಉದ್ದೇಶ ಹಾಗೂ ಶಾಸ್ತ್ರೀಯ ಪರಂಪರೆಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಅವಿಮುಕ್ತೇಶ್ವರಾನಂದ ಹೇಳಿದ್ದಾರೆ.

ಮನುಸ್ಮೃತಿಯ ‘ಪಿತಾ ರಕ್ಷತಿ ಕೌಮಾರೆ, ಭರ್ತಾ ರಕ್ಷತಿ ಯೌವನೇ...’ ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ಇದರಲ್ಲಿ ಮಹಿಳೆಯರ ಪರತಂತ್ರತೆಯ ಬಗ್ಗೆ ಹೇಳಲಾಗಿಲ್ಲ. ಕುಟುಂಬ ಮತ್ತು ಸಮಾಜದ ಜವಾಬ್ದಾರಿಯಾಗಿ ಮಹಿಳೆಯರ ರಕ್ಷಣೆಯ ಕುರಿತು ಉಲ್ಲೇಖಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸಂಸ್ಕೃತದಲ್ಲಿನ ‘ರಕ್ಷತಿ’ ಎಂಬ ಪದದ ಅರ್ಥ ರಕ್ಷಣೆ ಮಾಡುವುದು, ನಿಯಂತ್ರಣ ಹೇರುವುದು ಅಲ್ಲ ಎಂದು ಅವರು ಹೇಳಿದ್ದಾರೆ.

ಸನಾತನ ಪರಂಪರೆಯಲ್ಲಿ ನಾರಿಯನ್ನು ಶಕ್ತಿ ಮತ್ತು ಗೌರವದ ಪ್ರತಿರೂಪವಾಗಿ ಕಾಣಲಾಗಿದೆ. ಋಗ್ವೇದದ ಋಷಿಕೆಯರನ್ನು ಉಲ್ಲೇಖಿಸಿದ ಅವರು, ಭಾರತೀಯ ಸಂಸ್ಕೃತಿ ಪರಸ್ಪರ ಪೂರಕತೆ ಮತ್ತು ಗೌರವದ ತತ್ವವನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಮನುಸ್ಮೃತಿಯ ಬೆಂಬಲಿಗ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನೂ ಅವರು ತಳ್ಳಿಹಾಕಿದ್ದಾರೆ. ಭಾರತದಲ್ಲಿ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತದೆ. ಯಾವುದೇ ರಾಜಕೀಯ ಪಕ್ಷವನ್ನು ಮನುಸ್ಮೃತಿಯೊಂದಿಗೆ ಜೋಡಿಸುವುದು ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಮನುಸ್ಮೃತಿ ಹಾಗೂ ಧರ್ಮಶಾಸ್ತ್ರಗಳ ಕುರಿತು ಸಂಸತ್ತು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅಸತ್ಯ ಹಾಗೂ ದಾರಿ ತಪ್ಪಿಸುವ ಪ್ರಚಾರ ಮುಂದುವರಿದಿದೆ ಎಂದು ಪುನರುಚ್ಚರಿಸಿದ ಶಂಕರಾಚಾರ್ಯರು, ಇಂತಹ ಹೇಳಿಕೆಗಳಿಂದಲೇ ಈ ಹಿಂದೆ ರಾಹುಲ್ ಗಾಂಧಿ ಅವರನ್ನು ‘ಹಿಂದೂ ಧರ್ಮದಿಂದ ಬಹಿಷ್ಕರಿಸಲಾಗಿದೆ’ ಎಂಬ ಘೋಷಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ತಮ್ಮ ಆಕ್ಷೇಪ ಯಾವುದೇ ರಾಜಕೀಯ ಪಕ್ಷದ ವಿರೋಧಕ್ಕೆ ಸೀಮಿತವಾಗಿಲ್ಲ. ಸನಾತನ ಧರ್ಮಗ್ರಂಥಗಳ ಕುರಿತು ಆಧಾರರಹಿತ ಮತ್ತು ದಾರಿ ತಪ್ಪಿಸುವ ಪ್ರಚಾರದ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ಶಾಸ್ತ್ರೀಯ ಅಧ್ಯಯನವಿಲ್ಲದೆ ಧರ್ಮಗ್ರಂಥಗಳ ಕುರಿತು ಇದೇ ರೀತಿಯ ಹೇಳಿಕೆಗಳು ಮುಂದುವರಿದರೆ ಸನಾತನ ಸಮಾಜವು ವೈಚಾರಿಕ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿರೋಧಿಸುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande