
ನವದೆಹಲಿ, 25 ಆಗಸ್ಟ್ (ಹಿ.ಸ.):
ಆ್ಯಂಕರ್:ಸಪ್ತಧಾರೆ’ ವಿಕಸಿತ ಭಾರತ ನಿರ್ಮಾಣದ ಮಾರ್ಗಸೂಚಿಯಾಗಿದ್ದು, ದೇಶವು ಏಳು ಪ್ರಮುಖ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಆಗಸ್ಟ್ರಂದು ಕೆಂಪುಕೋಟೆಯ ಆವರಣದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಮುಂದಿಟ್ಟ ‘ಸಪ್ತಧಾರೆ’ ದೃಷ್ಟಿಕೋನವು ವಿಕಸಿತ ಭಾರತ ನಿರ್ಮಾಣದ ಸ್ಪಷ್ಟ ಮಾರ್ಗಸೂಚಿಯಾಗಿದೆ ಎಂದರು.
‘ಸಪ್ತಧಾರೆ’ ಅಡಿಯಲ್ಲಿ ಉತ್ಪಾದನಾ ಸಾಮರ್ಥ್ಯ, ಕೃಷಿ ಮತ್ತು ಆಹಾರ ಸಂಸ್ಕರಣೆ, ತಂತ್ರಜ್ಞಾನ ಮತ್ತು ನವೋದ್ಯಮ, ಹಸಿರು ಹಾಗೂ ನೀಲಿ ಆರ್ಥಿಕತೆ, ಮೃದುಶಕ್ತಿ, ಗತಿಶಕ್ತಿ ಮತ್ತು ರಕ್ಷಣಾ ಸಾಮರ್ಥ್ಯ ಎಂಬ ಏಳು ಪ್ರಮುಖ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಉತ್ಪಾದನಾ ಕ್ಷೇತ್ರದಲ್ಲಿ ಬಲಿಷ್ಠ ದೇಶೀಯ ಮೌಲ್ಯ ಸರಪಳಿ, ದೋಷರಹಿತ ಹಾಗೂ ಜಾಗತಿಕ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಬೇಳೆಕಾಳು ಮತ್ತು ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಿಸುವುದು, ಸಾವಯವ ಕೃಷಿಗೆ ಉತ್ತೇಜನ ಹಾಗೂ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಭಾರತ ಬಾಹ್ಯಾಕಾಶ, ಕ್ವಾಂಟಂ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಕೇಂದ್ರಗಳಂತಹ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಯುಪಿಐ 10 ವರ್ಷ ಪೂರೈಸಿದ್ದು, ಇದೀಗ ವಿಶ್ವದ ಅತಿದೊಡ್ಡ ತ್ವರಿತ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ ಎಂದು ಪಾತ್ರಾ ಹೇಳಿದರು.
ಯುಪಿಐ ಕುರಿತು ಕಾಂಗ್ರೆಸ್ ನಾಯಕರು ಹಿಂದೆ ವ್ಯಂಗ್ಯವಾಡಿದ್ದರು ಎಂದು ಆರೋಪಿಸಿದ ಅವರು, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಯುಪಿಐ ಅನ್ನು ಟೀಕಿಸಿದ್ದರು. ಆದರೆ ಇಂದು ಅದರ ಸಾಧನೆ ಇಡೀ ಜಗತ್ತಿನ ಮುಂದೆ ಇದೆ. ಈ ಸಾಧನೆಗಳನ್ನು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರಬಹುದು ಎಂದು ವ್ಯಂಗ್ಯವಾಡಿದರು.
ಹಸಿರು ಮತ್ತು ನೀಲಿ ಆರ್ಥಿಕತೆ, ಯೋಗ, ಆಯುರ್ವೇದ, ಸಾಂಸ್ಕೃತಿಕ ಪ್ರವಾಸೋದ್ಯಮ, ಸಿನಿಮಾ, ದೃಶ್ಯ ಪರಿಣಾಮಗಳು ಹಾಗೂ ಆಟಗಳ ಉದ್ಯಮದ ಮೂಲಕ ಭಾರತದ ಜಾಗತಿಕ ಗುರುತನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ವೇಗದ ರೈಲು, ಆಧುನಿಕ ಹೆದ್ದಾರಿ, ಒಳನಾಡು ಜಲಮಾರ್ಗಗಳು ಹಾಗೂ ಸ್ವದೇಶಿ ರಕ್ಷಣಾ ಉತ್ಪಾದನೆಯ ವಿಸ್ತರಣೆಯ ಮೂಲಕ ವಿಕಸಿತ ಭಾರತದ ಗುರಿಗೆ ವೇಗ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.