
ಬಳ್ಳಾರಿ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮವು 2026-27ನೇ ಸಾಲಿನ ವಿವಿಧ ಕಲ್ಯಾಣ ಹಾಗೂ ಆರ್ಥಿಕ ಸಬಲೀಕರಣ ಯೋಜನೆಗಳಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲು ಅರ್ಹ ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಯೋಜನೆಗಳ ವಿವರ:
ಅರಿವು ವಿದ್ಯಾಭ್ಯಾಸ ಸಾಲ: ಸಿಇಟಿ, ನೀಟ್, ಜೆಇಇ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು, ಸಾಮಾನ್ಯ ಪದವಿ, ಸ್ನಾತಕೋತ್ತರ, ಪಿಹೆಚ್.ಡಿ., ಐಟಿಐ ಹಾಗೂ ಡಿಪ್ಲೋಮಾ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ. (ಸರ್ಕಾರಿ, ಮ್ಯಾನೇಜ್ಮೆಂಟ್ ಹಾಗೂ ಖಾಸಗಿ ಸೀಟುಗಳಿಗೂ ಅನ್ವಯ).
ವಿದೇಶಿ ವಿದ್ಯಾಭ್ಯಾಸ ಸಾಲ: ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ವ್ಯಾಸಂಗಕ್ಕಾಗಿ ರೂ.20 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯ.
ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ: ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ಗಳಿಂದ ಪಡೆಯುವ ಸಾಲಕ್ಕೆ ಶೇ. 50 ರಷ್ಟು ಅಥವಾ ಗರಿಷ್ಟ ರೂ.2 ಲಕ್ಷ ಬ್ಯಾಕ್-ಎಂಡ್ ಸಹಾಯಧನ.
ಸಮುದಾಯ ಭವನ ನಿರ್ಮಾಣ: ಜಿಲ್ಲಾ ಕೇಂದ್ರ ಅಥವಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಠ ರೂ.1 ಕೋಟಿ ಹಾಗೂ ಇತರೆ ಪ್ರದೇಶಗಳಲ್ಲಿ ಗರಿಷ್ಠ ರೂ.50 ಲಕ್ಷದವರೆಗೆ ಅನುದಾನ.
ಚರ್ಚ್ ದುರಸ್ತಿ ಹಾಗೂ ಆವರಣ ಗೋಡೆ ನಿರ್ಮಾಣ: 10 ವರ್ಷ ಮೇಲ್ಪಟ್ಟ ಚರ್ಚ್ಗಳ ಜೀರ್ಣೋದ್ಧಾರಕ್ಕೆ ಶೇ. 50 ರಷ್ಟು (ಗರಿಷ್ಠ ರೂ.50 ಲಕ್ಷ) ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಶೇ. 90 ರಷ್ಟು (ಗರಿಷ್ಠ ರೂ.25 ಲಕ್ಷ) ನೆರವು.
ಸ್ಮಶಾನಗಳ ಮೂಲಭೂತ ಸೌಕರ್ಯ: ಆವರಣ ಗೋಡೆ, ವಿದ್ಯುದ್ದೀಕರಣ, ಕುಡಿಯುವ ನೀರು ಮತ್ತು ಕೊಳವೆಬಾವಿ ಸೌಲಭ್ಯಕ್ಕಾಗಿ ಯೋಜನಾ ವೆಚ್ಚದ ಶೇ. 90 ರಷ್ಟು ಅಥವಾ ಗರಿಷ್ಠ ರೂ.30 ಲಕ್ಷವರೆಗೆ ಅನುದಾನ.
ಆಹಾರ ಮಳಿಗೆ/ಮೊಬೈಲ್ ಫುಡ್ ಟ್ರಕ್: ಸುಸಜ್ಜಿತ ಸಂಚಾರಿ ಆಹಾರ ಉದ್ಯಮ ಆರಂಭಿಸಲು ಆರ್ಥಿಕ ನೆರವು.
ವಿಶೇಷ ಚೇತನರು ಮತ್ತು ಎಚ್ಐವಿ ಪೀಡಿತರ ಆಶ್ರಯ ಗೃಹ ಯೋಜನೆ: ಉಚಿತ ಆಹಾರ, ವಸತಿ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ಅರ್ಹ ಸ್ವಯಂಸೇವಾ ಸಂಸ್ಥೆಗಳಿಗೆ ಗರಿಷ್ಠ ರೂ.8 ಲಕ್ಷ ಸಹಾಯಧನ.
ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ನೆರವು: ಕನಿಷ್ಠ 3 ವರ್ಷಗಳಿಂದ ನೋಂದಣಿಯಾಗಿ, 25ಕ್ಕೂ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಅರ್ಹ ಸಂಸ್ಥೆಗಳಿಗೆ ಆರ್ಥಿಕ ನೆರವು.
*ಅರ್ಹತೆ ಮತ್ತು ಷರತ್ತುಗಳು:*
ಅರ್ಜಿದಾರರು ಜಿಲ್ಲೆಯ ಕನಿಷ್ಠ 15 ವರ್ಷಗಳ ಖಾಯಂ ನಿವಾಸಿಯಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.6,00,000 ಮೀರಬಾರದು. ವಯೋಮಿತಿ 18 ರಿಂದ 55 ವರ್ಷಗಳ ಒಳಗಿರಬೇಕು. ಮಹಿಳೆಯರಿಗೆ ಶೇ. 33 ಹಾಗೂ ವಿಕಲಚೇತನರಿಗೆ ಶೇ. 3 ರಷ್ಟು ಮೀಸಲಾತಿ ಇರುತ್ತದೆ. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅರ್ಹ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಐಎಫ್ಎಸ್ಸಿ ಕೋಡ್ ಹೊಂದಿರುವ ಬ್ಯಾಂಕ್ ಪಾಸ್ಬುಕ್ ಪ್ರತಿ, ಯೋಜನಾ ವರದಿ ಹಾಗೂ ಭಾವಚಿತ್ರಗಳೊಂದಿಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಆನ್ಲೈನ್ ವೆಬ್ಸೈಟ್: https://kccdonline.karnataka.gov.in/ ಗೆ ಭೇಟಿ ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮ (ನಿ), 1ನೇ ಮಹಡಿ, ಮೌಲಾನ ಆಜಾದ್ ಭವನ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರ, ಬಳ್ಳಾರಿ-583101 ಅಥವಾ ದೂ.08392-294370 ಗೆ ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್