
ಗಂಗಾವತಿ, 04 ಜುಲೈ (ಹಿ.ಸ.)
ಆ್ಯಂಕರ್ : ಸಾಲಬಾಧೆಯಿಂದ ಜಿಗುಪ್ಸೆ ಹೊಂದಿದ್ದ ಚಿನ್ನದ ವ್ಯಾಪಾರಿಯ ಕುಟುಂಬದಲ್ಲಿ ಮನೆಯ ಯಜಮಾನ, ಆತನ ಪತ್ನಿ ಮತ್ತು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಮಗನ ಸಮೇತ ಎಲ್ಲರೂ ಒಟ್ಟಿಗೇ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಶನಿವಾರ ನಸುಕಿನಲ್ಲಿ ವರಿದಿಯಾಗಿದೆ.
ಮೃತರು ಗಂಗಾವತಿಯ ಪ್ರಶಾಂತ್ ನಗರದ ನಿವಾಸಿಗಳಾದ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ ರಾಯ್ಕರ್ (46) ಮತ್ತು ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಶಶಾಂಕ್ ರಾಯ್ಕರ್ (21) ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲೇ ಮೂವರೂ ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.
ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಜುವೆಲ್ಲರಿ (ಚಿನ್ನದ ಆಭರಣ) ಅಂಗಡಿಯನ್ನು ನಡೆಸುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿ ಸಾಕಷ್ಟು ಸಾಲವನ್ನು ಮಾಡಿದ್ದರು. ಇವರು ಹೊಸದಾಗಿ ಕಟ್ಟಿಸಿದ್ದ ಮನೆಯನ್ನು ಖಾಸಗಿ ಲೇವಾದೇವಿದಾರರು ಒತ್ತೆ ಹಾಕಿ, ಬಲವಂತವಾಗಿ ಬಿಡಿಸಿದಾಗ ಅವರು ಹಳೆಯ ಮನೆಗೆ ಬಂದು, ಅಲ್ಲಿಯೇ ನೆಲೆಸಿದ್ದರು. ಅಲ್ಲದೇ, ಖಾಸಗಿ ಬ್ಯಾಂಕ್ಗಳ ಸಾಲ, ಲೇವಾದೇವಿದಾರರಿಂದ ಪಡೆದ ಸಾಲ ಹಾಗೂ ಸರ್ಕಾರಿ ಬ್ಯಾಂಕ್ಗಳಿಂದ ಸಾಲವನ್ನು ತೀರಿಸಲಾಗದೇ ಜಿಗುಪ್ಸೆ ಹೊಂದಿ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್