247ನೇ ದಿನದ ಬಲ್ಡೋಟ ತೊಲಗಿಸಿ ಧರಣಿ: ಜು, 7ರಂದು ಚಿತ್ರನಟ ಚೇತನ್ ಅಹಿಂಸಾ
ಕೊಪ್ಪಳ, 04 ಜುಲೈ (ಹಿ.ಸ.) ಆ್ಯಂಕರ್ : ನಗರಸಭೆ ಆವರಣದಲ್ಲಿ 247 ದಿನಗಳಿಂದ ಬಲ್ಡೋಟ ತೊಲಗಿಸಿ, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ಎಂ.ಎಸ್.ಪಿ.ಎಲ್ ಪೆಲ್ಲೆಟ್ ಕಾರ್ಖಾನೆ ಬಂದ್ ಮಾಡಿ, ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಿ, ಎರಡು ಬೆಳೆ ಭತ್ತ
247ನೇ ದಿನದ ಬಲ್ಡೋಟ ತೊಲಗಿಸಿ ಧರಣಿ: ಜು, 7ರಂದು ಚಿತ್ರನಟ ಚೇತನ್ ಅಹಿಂಸಾ


ಕೊಪ್ಪಳ, 04 ಜುಲೈ (ಹಿ.ಸ.)

ಆ್ಯಂಕರ್ : ನಗರಸಭೆ ಆವರಣದಲ್ಲಿ 247 ದಿನಗಳಿಂದ ಬಲ್ಡೋಟ ತೊಲಗಿಸಿ, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ಎಂ.ಎಸ್.ಪಿ.ಎಲ್ ಪೆಲ್ಲೆಟ್ ಕಾರ್ಖಾನೆ ಬಂದ್ ಮಾಡಿ, ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಿ, ಎರಡು ಬೆಳೆ ಭತ್ತ ಬೆಳೆಯಲು ಜಲಾಶಯದ ನೀರು ಮೀಸಲಿಟ್ಟು ಕಾರ್ಖಾನೆಗಳಿಗೆ ಯಥೇಚ್ಚ ನೀರು ಕೊಡುವುದನ್ನು ನಿಲ್ಲಿಸಿ, ಏಮ್ಸ್ ಸಂಸ್ಥೆಯಿಂದ ಬಾಧಿತರ ಆರೋಗ್ಯ ಸರ್ವೆ, ಐಐಎಸ್ಸಿ ಸಂಸ್ಥೆಯಿಂದ ಪರಿಸರ ಸರ್ವೆ ನಡೆಸಬೇಕು, ಬಾಧಿತ ಹಳ್ಳಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.

ಜು. 7ರಂದು 'ಕೊಪ್ಪಳ ಸಪ್ಪಳ ಆಂದೋಲನ' ನಡೆಯಲಿದ್ದು ಧರಣಿ ಸ್ಥಳದಿಂದ ಹಳೆ ಜಿಲ್ಲಾ ಪಂಚಾಯತ್ ಆವರಣದ ರೈತ ಸಂಪರ್ಕ ಕೇಂದ್ರದ ವರೆಗೆ ತಟ್ಟೆ ಬಾರಿಸುತ್ತಾ ಭೂಮಿ ಕಸಿದುಕೊಳ್ಳಬೇಡಿ, ಮಾಲಿನ್ಯ ಮಾಡಿ ಕೃಷಿ ನಾಶ ಮಾಡಿ ಉಣ್ಣುವ ತಟ್ಟೆ ಬರಿದು ಮಾಡಬೇಡಿ ಎಂದು ಆಗ್ರಹಿಸಿ ಮೆರವಣಿಗೆ ನಡೆಯುತ್ತದೆ. ಅದೇ ದಿನ ಸಂಜೆ 5-30 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಕನ್ನಡ ಚಿತ್ರನಟ ಚೇತನ್ ಅಹಿಂಸಾ ಅವರು ಹೋರಾಟಗಾರರ ತಂಡದೊಂದಿಗೆ ಮುಂದಿನ ನಡೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ಧರಣಿ ಹೋರಾಟಗಾರರು ತಿಳಿಸಿದ್ದಾರೆ.

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು,, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ವಿಜಯಲಕ್ಷ್ಮಿ ಗುತ್ತೇದಾರ ಮುಂತಾದವರು ಪಾಲ್ಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande