
ಡೆಹ್ರಾಡೂನ್, ಜುಲೈ 28(ಹಿ.ಸ.):
ಆ್ಯಂಕರ್:
ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೂಕುಸಿತದ ಆತಂಕದ ಹಿನ್ನೆಲೆಯಲ್ಲಿ ಚಾರಧಾಮ ಯಾತ್ರೆಯನ್ನು ಇಂದು ಮತ್ತು ನಾಳೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಉತ್ತರಕಾಶಿ, ದೆಹ್ರಾಡೂನ್, ಟೆಹ್ರಿ, ರುದ್ರಪ್ರಯಾಗ, ಚಮೋಲಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀದಿಂದ ಅತಿಭಾರೀ ಮಳೆಯ ಮುನ್ಸೂಚನೆ ನೀಡಿದೆ. ನಿರಂತರ ಮಳೆಯಿಂದ ಭೂಕುಸಿತ, ರಸ್ತೆ ಬಂದ್, ನದಿಗಳ ನೀರಿನ ಮಟ್ಟ ಏರಿಕೆ ಹಾಗೂ ವಿದ್ಯುತ್ ಮತ್ತು ಕುಡಿಯುವ ನೀರಿನ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ದೆಹ್ರಾಡೂನ್ ಜಿಲ್ಲೆಯ ಮಾಲದೇವತಾ ಪ್ರದೇಶದಲ್ಲಿ ಅತ್ಯಧಿಕ 233 ಮಿ.ಮೀ. ಮಳೆ ದಾಖಲಾಗಿದೆ. ನಂದಾ ಕಿ ಚೌಕಿ ಸಮೀಪ ಭಾರೀ ಮಳೆಯಿಂದ ರಸ್ತೆ ಕುಸಿದಿದ್ದು, ಜಿಲ್ಲಾಡಳಿತ ತುರ್ತು ದುರಸ್ತಿ ಕಾರ್ಯ ಕೈಗೊಂಡಿದೆ. ಪರಿಸ್ಥಿತಿ ಸುಧಾರಿಸಿ ಮಾರ್ಗಗಳು ಸುರಕ್ಷಿತವಾದ ಬಳಿಕ ಚಾರಧಾಮ ಯಾತ್ರೆಯನ್ನು ಪುನರಾರಂಭಿಸಲಾಗುವುದು ಎಂದು ಆಡಳಿತ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.