



ಬಳ್ಳಾರಿ, 22 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಫುಟ್ ಓವರ್ ಬ್ರಿಡ್ಜ್ (ಎಫ್ಓಬಿ) ಮತ್ತು ಎಸ್ಕಲೇಟರ್ - ಲಿಫ್ಟ್ ಅಳವಡಿಕೆಯು ಜುಲೈ 30ರೊಳಗಾಗಿ ಜನಸೇವೆಗೆ ಅರ್ಪಣೆಗೊಳ್ಳುವ ಸಾಧ್ಯತೆಗಳಿವೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ, ಸದಸ್ಯರಾದ ಸೊಂತ ಗಿರಿಧರ್ ಅವರು, ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿಯ ಕಾಮಗಾರಿಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆದಾರರು, ಜುಲೈ 30ರೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಕೆಲಸವನ್ನು ವೇಗವಾಗಿ ನಡೆಸಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ, ಸದಸ್ಯರಾದ ಸೊಂತ ಗಿರಿಧರ್ ಅವರು, ಅಮೃತ್ ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಕುರಿತು ಡಿಆರ್ಯುಸಿಸಿ ಸಭೆಗಳಲ್ಲಿ ವಿಷಯ ಪ್ರಸ್ತಾಪ ಮಾಡಿ, ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದೆ. ಈಗ ಕಾಮಗಾರಿ ವೇಗ ಪಡೆದಿದೆ ಎಂದರು.
ಬಳ್ಳಾರಿ ಜಿಲ್ಲಾ ಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್, ಗೌರವ ಕಾರ್ಯದರ್ಶಿಗಳಾಗಿರುವ ಕೆ.ಸಿ. ಸುರೇಶಬಾಬು ಅವರು, ಅಮೃತ್ ಯೋಜನೆಯಲ್ಲಿ ಕಾಮಗಾರಿ ಪ್ರಾರಂಭವಾಗಿದ್ದರೂ ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದ ಬಗ್ಗೆ ಸಚಿವ ವಿ. ಸೋಮಣ್ಣ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಕಾರಣ ಕಾಮಗಾರಿಗೆ ವೇಗ ಸಿಕ್ಕಿದೆ ಎಂದರು.
ರೈಲ್ವೆಯ ಕ್ಲಾಸ್-1 ಗುತ್ತಿಗೆದಾರರಾಗಿರುವ ವೆಂಕಟೇಶಲು ಅವರು, 40 ಅಡಿ ಅಗಲ, 80 ಮೀಟರ್ ಉದ್ದದ, ಅಂದರೆ ರೈಲ್ವೆ ಪ್ಲಾಟ್ಫಾರಂ 2 ಮತ್ತು 3 ಅನ್ನು ಸಂಪರ್ಕ ಮಾಡುವಂತೆ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಆಗುತ್ತಿದೆ. ಅಷ್ಟೇ ಅಲ್ಲ, ಆಟೋಮೆಟಿಕ್ ಎಸ್ಕಲೇಟರ್ ಮತ್ತು ಲಿಫ್ಟ್ ಬಂದಿದ್ದು, ಅವುಗಳ ಅಳವಡಿಕೆಯು ಕೂಡ ಪೂರ್ಣಗೊಳ್ಳಲಿದೆ. ಈ ಕಾಮಗಾರಿಗಾಗಿ ಜೂನ್ 1ನೇ ತಾರೀಕಿನಿಂದ ನಿತ್ಯವೂ 5 ತಾಸುಗಳ ಕಾಲ ಜಿಂದಾಲ್ಗೆ ಹೋಗುವ ಗೂಡ್ಸ್ಗಳನ್ನು ತಡೆಯಲಾಗುತ್ತಿದೆ. ಕಾಮಗಾರಿ ತ್ವರಿತವಾಗಿ ನಡೆದಿದೆ ಎಂದರು.
ಬಳ್ಳಾರಿ ರೈಲ್ವೆ ವಿಭಾಗದ ಮುಖ್ಯ ಕಮರ್ಷಿಯಲ್ ಇನ್ಸ್ಪೆಕ್ಟರ್ ರಮೇಶ್ ಅವರು, ಲಿಫ್ಟ್, ಸೆನ್ಸಾರ್ ಆಧಾರಿತ ಎಸ್ಕಲೇಟರ್ ಯಂತ್ರಗಳು ಬಂದಿವೆ. ಪ್ರಯಾಣಿಕರು ರೈಲ್ವೆ ನಿಲ್ದಾಣದಿಂದ ಹೊರಗಡೆ ಹೋಗುವ ಮತ್ತು ಹೊರಗಡೆಯಿಂದ ಒಳಗಡೆ ಬರುವ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಸಿವಿಲ್ ಕಾಮಗಾರಿ ವೇಗವಾಗಿ ನಡೆದಿವೆ. ನಿಗಧಿತ ಅವಧಿಯಲ್ಲಿ ಈ ಸೌಲಭ್ಯಗಳು ಪ್ರಯಾಣಿಕರ ಸೇವೆಗೆ ಸಮರ್ಪಣೆಗೊಳ್ಳುವ ಸಾಧ್ಯತೆಗಳಿವೆ ಎಂದರು.
ರೈಲ್ವೆ ಅಧಿಕಾರಿ ಎಸ್. ಹೊನ್ನೂರುಸ್ವಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್