


ಕೊಪ್ಪಳ, 22 ಜೂನ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ನೀರು ಬಳಸಿಕೊಂಡು ಕೊಪ್ಪಳ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಏತ ನೀರಾವರಿ ಪ್ರಯೋಜನ ಪಡೆರಬಹುದಿತ್ತು ಎಂದು ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ನಗರಸಭೆ ಆವರಣದಲ್ಲಿ 235 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಸರ ಹಿತರಕ್ಷಣಾ ವೇದಿಕೆಯ ಜಂಟಿ ನೇತೃತ್ವದಲ್ಲಿ ಅವಳಿ ನಗರದ ಭವಿಷ್ಯ ಮಂಕಾಗಿಸಲು 54 ಸಾವಿರ ಕೋಟಿ ಬೃಹತ್ ಬಂಡವಾಳ ಹೂಡಲು ಮುಂದಾದ ಬಲ್ಡೋಟ ಬಿಎಸ್ಪಿಎಲ್ ವಿರೋಧಿಸಿ, ಬಲ್ಡೋಟ ಎಐಎಸ್ಎಲ್ ಅಕ್ರಮವಾಗಿ ವಶಪಡಿಸಿಕೊಂಡ ನಗರ ಹತ್ತಿರದ 44.35ಎಕರೆ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಿ, 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟೈಜೇಶನ್ ಘಟಕ ಬಂದ್ ಕೊಪ್ಪಳ ನಗರದ ಜನರ ಆರೋಗ್ಯ ಕಾಪಾಡಬೇಕೆಂದು ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ.
ಹರಗೇರಿಯವರು ಮಾತು ಮುಂದುವರೆಸಿ ಬಲ್ಡೋಟ ನಿಲುಗಡೆಯ ಕುರಿತು ಕೊಪ್ಪಳ ಜನರ ಹೋರಾಟದ ಬೇಡಿಕೆಯನ್ನು ನೆನೆಗುದಿಗೆ ಹಾಕಿರುವ ಸರ್ಕಾರದ ಕ್ರಮ ಸರಿಯಲ್ಲ.
ಸಿದ್ದರಾಮಯ್ಯನವರು ನಿರ್ಗಮನಕ್ಕೆ ಮುಂಚೆ ನಮಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿ ಇದ್ದೆವು. ಈಗ ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು ಕೊಪ್ಪಳ ಜನರ ಪರವಾಗಿ ಹೋರಾಟದ ವೇದಿಕೆಯಿಂದ ಸ್ವಾಗತಿಸುತ್ತೇವೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾರ್ಖಾನೆಗಳ ಮಾಲಿನ್ಯ ತೊಡೆದು ಹಾಕಲು ಎರಡು ದಶಕವಾದರೂ ಆಗಲ್ಲ. ಇದರಿಂದ ತಾಲೂಕಿನ 30 ಸಾವಿರ ಎಕರೆ ಕೃಷಿ ಭೂಮಿ, 22 ಹಳ್ಳಿಗಳು ಮಾಲಿನ್ಯದಿಂದ ಹಾಳಾಗಿವೆ. ಹಾಗೆ ಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಬೇಚಾರ ಗ್ರಾಮಗಳಾಗುತ್ತವೆ.
ಮುಖ್ಯಮಂತ್ರಿಗಳು ಇದೇ 25ರಂದು ಮುನಿರಾಬಾದ್ ಡ್ಯಾಂ ಕ್ರಸ್ಟ್ ಗೇಟ್ ಲೋಕಾರ್ಪಣೆ ಮಾಡುತ್ತಿದ್ದು, ಶಿಷ್ಟಾಚಾರದ ಕಾರ್ಯಕ್ರಮಕ್ಕಷ್ಟೇ ಸೀಮಿತರಾಗದೆ ತಾಲೂಕಿನ ಬಾಧಿತ ಹಳ್ಳಿಯ ಜನರನ್ನು ಭೇಟಿ ಮಾಡಿ, ಬಸಾಪುರ ಕೆರೆ ಹೋರಾಟ ಮತ್ತು ಕೊಪ್ಪಳ ನಗರದಲ್ಲಿ ಬಲ್ಡೋಟ ವಿರೋಧಿ ಹೋರಾಟ ಸ್ಥಳಕ್ಕೆ ಭೇಟಿ ಕೊಡಲಿ ಎಂದು ಆಗ್ರಹಿಸಿದರು.
ಧರಣಿಯಲ್ಲಿ ಗಾಯಕ ಸದಾಶಿವ ಪಾಟೀಲ್, ಪ್ರಕಾಶಕ ಡಿ.ಎಂ.ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಕಾವ್ಯಾ ಗಡಾದ, ನಾಗರತ್ನಾ ಮಾದಿನೂರು, ಮಾನವ ಬಂಧುತ್ವ ವೇದಿಕೆಯ ಭೀಮಪ್ಪ ಹವಳಿ, ರಂಗಕರ್ಮಿ ಲಕ್ಷ್ಮಣ ಪಿರಗಾರ, ನಟರಾಜ ಸವಡಿ, ಕೋಟೇಶ ಸಾಣಾಪುರ, ಶರಣು ಬಿ. ಓಜನಹಳ್ಳಿ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ಅನುಕುಮಾರ, ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ ಬಸಾಪು,, ಗಾಳೆಪ್ಪ ಪೂಜಾರ ಹೂವಿನಾಳ, ಮಂಜುನಾಥ ಕವಲೂರು ಇನ್ನಿತರರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್