ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಬಾಗಲಕೋಟೆಗೆ ಹಸಿರಿನ ತಂಪು ; ಮಿಯಾವಾಕಿ ಕಾಡಿನಿಂದ ಉಷ್ಣಾಂಶ 2 ಡಿಗ್ರಿ ಕಡಿಮೆ
ಬಾಗಲಕೋಟೆ, 20 ಜೂನ್ (ಹಿ.ಸ.) : ಆಂಕರ್ : ಸದಾ ಬಿಸಿಲಿನ ತಾಪಮಾನದಿಂದ ಕಂಗೆಡುತ್ತಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜನತೆಗೆ ಇದೀಗ ಪರಿಸರ ಸ್ನೇಹಿ ಹಾಗೂ ಸಂತಸದ ಸುದ್ದಿಯೊಂದು ದೊರೆತಿದೆ. ಮುಳುಗಡೆ ನಗರಿ ಬಾಗಲಕೋಟೆಯ ಸಮೀಪದಲ್ಲೇ ಜರ್ಮನಿಯ ತಂತ್ರಜ್ಞಾನ ಆಧಾರಿತ ‘ಮಿಯಾವಾಕಿ’ ಮಾದರಿಯ ದಟ್ಟ ಅರ
Van


ಬಾಗಲಕೋಟೆ, 20 ಜೂನ್ (ಹಿ.ಸ.) :

ಆಂಕರ್ : ಸದಾ ಬಿಸಿಲಿನ ತಾಪಮಾನದಿಂದ ಕಂಗೆಡುತ್ತಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜನತೆಗೆ ಇದೀಗ ಪರಿಸರ ಸ್ನೇಹಿ ಹಾಗೂ ಸಂತಸದ ಸುದ್ದಿಯೊಂದು ದೊರೆತಿದೆ. ಮುಳುಗಡೆ ನಗರಿ ಬಾಗಲಕೋಟೆಯ ಸಮೀಪದಲ್ಲೇ ಜರ್ಮನಿಯ ತಂತ್ರಜ್ಞಾನ ಆಧಾರಿತ ‘ಮಿಯಾವಾಕಿ’ ಮಾದರಿಯ ದಟ್ಟ ಅರಣ್ಯ ನಿರ್ಮಾಣವಾಗಿದ್ದು, ಇದು ಜಿಲ್ಲೆಯ ಹವಾಮಾನದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ.

ಬಾಗಲಕೋಟೆಯ ಗದ್ದನಕೇರಿ ಗ್ರಾಮದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಸೇವಾ ಜನನಿ ಹಾಗೂ ಮಿಸ್ಟಿಯಾನ್ ಸಂಸ್ಥೆಗಳ ಸಮಾಜಮುಖಿ ಚಿಂತನೆಯ ಫಲವಾಗಿ ಈ ಹಸಿರು ಯೋಜನೆ ರೂಪುಗೊಂಡಿದೆ. ಕೇವಲ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ದಟ್ಟ ಕಾಡು ಇದೀಗ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದೆ.

ಸಾಮಾನ್ಯವಾಗಿ ಉತ್ತರ ಕರ್ನಾಟಕ ಎಂದರೆ ಜನರ ಕಣ್ಣ ಮುಂದೆ ಬರುವುದು ಉರಿ ಬಿಸಿಲು ಮತ್ತು ಬರದ ವಾತಾವರಣ. ಆದರೆ ಗದ್ದನಕೇರಿಯ ಈ ಸಣ್ಣ ಅರಣ್ಯ ಪ್ರದೇಶವು ಪ್ರಕೃತಿಯ ಶಕ್ತಿಗೆ ಸಾಕ್ಷಿಯಾಗಿದೆ. ದಟ್ಟವಾಗಿ ಬೆಳೆದಿರುವ ಮರಗಳು, ವಿವಿಧ ಜಾತಿಯ ಸಸ್ಯಗಳು ಹಾಗೂ ಹಸಿರಿನ ವಾತಾವರಣದಿಂದಾಗಿ ಇಲ್ಲಿ ಕಾಲಿಟ್ಟ ತಕ್ಷಣವೇ ತಂಪಾದ ಅನುಭವವಾಗುತ್ತಿದೆ.

ಮಿಯಾವಾಕಿ ಪದ್ಧತಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ಜಾತಿಯ ಗಿಡಗಳನ್ನು ನೆಟ್ಟು ವೇಗವಾಗಿ ಬೆಳೆಯುವಂತೆ ಮಾಡಲಾಗುತ್ತದೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿ ವಿವಿಧ ಪ್ರಭೇದಗಳ ಸಸಿಗಳನ್ನು ಬೆಳೆಸಲಾಗಿದೆ. ಈ ಅರಣ್ಯದೊಳಗೆ ಪ್ರವೇಶಿಸಿದಾಗ ಸುತ್ತಮುತ್ತಲಿನ ಪ್ರದೇಶಕ್ಕಿಂತ ಸುಮಾರು 2 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶದ ಅನುಭವವಾಗುತ್ತಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಪುಟ್ಟ ಕಾಡಿನಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಪ್ರಭೇದಗಳ ಹಣ್ಣಿನ ಗಿಡಗಳು ಹಾಗೂ ವಿವಿಧ ಸಸ್ಯ ಸಂಪತ್ತು ಬೆಳೆಸಲಾಗಿದೆ. ದಟ್ಟ ಮರಗಳ ನಡುವೆ ಹಕ್ಕಿಗಳ ಚಿಲಿಪಿಲಿ ನಾದ, ಹಸಿರಿನ ಸೌಂದರ್ಯ ಹಾಗೂ ತಂಪಾದ ವಾತಾವರಣವು ನಗರ ಪ್ರದೇಶದ ಜನರಿಗೆ ಪ್ರಕೃತಿಯ ಮಡಿಲಿನ ಅನುಭವ ನೀಡುತ್ತಿದೆ.

ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಅರಣ್ಯ ನಿರ್ಮಾಣವು ಪರಿಸರ ಸಂರಕ್ಷಣೆಯ ಜೊತೆಗೆ ಭವಿಷ್ಯದ ಪೀಳಿಗೆಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ. ಬಾಗಲಕೋಟೆಯಂತಹ ಬಿಸಿಲು ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಸೃಷ್ಟಿಯಾಗಿರುವ ಈ ಹಸಿರು ವನವು ನೈಸರ್ಗಿಕ ವರದಾನವಾಗಿ ಪರಿಣಮಿಸಿದೆ.

ಸೇವಾ ಜನನಿ ಹಾಗೂ ಮಿಸ್ಟಿಯಾನ್ ಸಂಸ್ಥೆಗಳ ಈ ವಿನೂತನ ಪರಿಸರ ಕಾಳಜಿ ಕಾರ್ಯಕ್ಕೆ ಜಿಲ್ಲೆಯ ಸಾರ್ವಜನಿಕರು, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಹಸಿರು ಯೋಜನೆಗಳು ಜಿಲ್ಲೆಯಲ್ಲಿ ರೂಪುಗೊಳ್ಳಲಿ ಎಂಬ ಆಶಯವೂ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande