
ಬೆಂಗಳೂರು, 19 ಜೂನ್ (ಹಿ.ಸ.) :
ಆ್ಯಂಕರ್ : ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮಿಳು ನಾಡಿನಲ್ಲಿ ಕಾಂಗ್ರೆಸ್ ಒಂದು ನಿಲುವು ಮತ್ತು ಕರ್ನಾಟಕದಲ್ಲಿ ಮತ್ತೊಂದು ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಅವರು, ರಾಜ್ಯದ ಹಿತಾಸಕ್ತಿಗಳನ್ನು ಮೈತ್ರಿ ರಾಜಕೀಯಕ್ಕಾಗಿ ಬಲಿಕೊಡಲಾಗಿದೆ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಾಂಗ್ರೆಸ್ ಮತ್ತೊಮ್ಮೆ ತನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಕರ್ನಾಟಕದ ಹಿತಾಸಕ್ತಿಗಳು ಮತ್ತು ರಾಜಕೀಯ ಲೆಕ್ಕಾಚಾರಗಳ ನಡುವೆ ಆಯ್ಕೆ ಮಾಡುವ ಸಂದರ್ಭ ಬಂದಾಗಲೆಲ್ಲಾ ರಾಜ್ಯವೇ ಮೊದಲ ಬಲಿಪಶುವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತಾರೂಢ ಮೈತ್ರಿಕೂಟವು ಮೇಕೆದಾಟು ಯೋಜನೆಯನ್ನು ಬಹಿರಂಗವಾಗಿ ವಿರೋಧಿಸುತ್ತಿದೆ. ಅಲ್ಲಿನ ಕಾಂಗ್ರೆಸ್ ಘಟಕವೂ ಯೋಜನೆಗೆ ವಿರೋಧ ವ್ಯಕ್ತಪಡಿಸುವವರ ಪರವಾಗಿ ನಿಂತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯ ಪರ ಹೋರಾಟ ನಡೆಸಿದವರಂತೆ ನಡೆದುಕೊಂಡು, ಪಾದಯಾತ್ರೆಗಳನ್ನು ಮಾಡಿ ಜನರ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಇದು ಕೇವಲ ಎರಡು ರೀತಿಯ ನಿಲುವಲ್ಲ; ಇದು ಅತ್ಯುನ್ನತ ಮಟ್ಟದ ರಾಜಕೀಯ ದ್ರೋಹ” ಎಂದು ಅಶೋಕ್ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಅಶೋಕ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ನಿಜವಾಗಿಯೂ ಕರ್ನಾಟಕದ ನೀರಿನ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿತ್ತೇ ಅಥವಾ ರಾಜಕೀಯ ಲಾಭಕ್ಕಾಗಿ ನಡೆಸಿದ ಅಭಿಯಾನವಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
“ಕರ್ನಾಟಕದ ನೀರಿನ ಹಕ್ಕುಗಳಿಗಾಗಿ ಹೋರಾಡುವುದಾಗಿ ಹೇಳಿ ಪಾದಯಾತ್ರೆ ನಡೆಸಿದ್ದೀರಿ. ಆದರೆ ಇಂದು ನಿಮ್ಮದೇ ಪಕ್ಷದ ನಾಯಕರು ಹಾಗೂ ಮೈತ್ರಿಕೂಟದ ಪಾಲುದಾರರು ಯೋಜನೆಗೆ ಅಡ್ಡಿಯಾಗುತ್ತಿರುವಾಗ ನೀವು ಏಕೆ ಮೌನವಾಗಿದ್ದೀರಿ? ನಿಮ್ಮ ಆಕ್ರೋಶ ಎಲ್ಲಿದೆ? ಪ್ರತಿರೋಧ ಎಲ್ಲಿದೆ? ನಾಯಕತ್ವ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ಗೆ ಇರುವ ನಿಷ್ಠೆಯ ಮುಂದೆ ಕರ್ನಾಟಕದ ಹಿತಾಸಕ್ತಿಗಳ ಬದ್ಧತೆ ಕೊನೆಗೊಳ್ಳುತ್ತದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದು ಅಶೋಕ್ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಸವಾಲು :
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನೂ ಟೀಕಿಸಿರುವ ಅಶೋಕ್, ಕರ್ನಾಟಕದ ಹಿತಾಸಕ್ತಿಗಳು ಮೈತ್ರಿ ರಾಜಕೀಯದ ಲೆಕ್ಕಾಚಾರಗಳಿಗೆ ಬಲಿಯಾಗಲಿವೆಯೇ ಎಂದು ಪ್ರಶ್ನಿಸಿದ್ದಾರೆ.
“ಮೇಕೆದಾಟು ಯೋಜನೆಯನ್ನು ವಿರೋಧಿಸುವ ನಿಮ್ಮ ಮಿತ್ರಪಕ್ಷಗಳು ಮತ್ತು ಕಾಂಗ್ರೆಸ್ ನಾಯಕರಿಗೆ ಕರ್ನಾಟಕದ ಹಿತಾಸಕ್ತಿಗಳು ಮಾತುಕತೆಗೆ ಒಳಪಡುವುದಿಲ್ಲ ಎಂದು ಹೇಳುವ ಧೈರ್ಯ ನಿಮಗಿದೆಯೇ?” ಎಂದು ಅವರು ಕೇಳಿದ್ದಾರೆ.
“ಮುಖವಾಡ ಕಳಚಿ ಬಿದ್ದಿದೆ”
ವರ್ಷಗಳಿಂದ ಕಾಂಗ್ರೆಸ್ ಚುನಾವಣಾ ಸಂದರ್ಭಗಳಲ್ಲಿ ಮೇಕೆದಾಟು ಯೋಜನೆಯ ವಿಚಾರವನ್ನು ಪ್ರಸ್ತಾಪಿಸಿ ರೈತರ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿರುವ ಅಶೋಕ್, ಇದೀಗ ಕಾಂಗ್ರೆಸ್ನ ನಿಜವಾದ ಮುಖವಾಡ ಕಳಚಿಬಿದ್ದಿದೆ ಎಂದು ಹೇಳಿದ್ದಾರೆ.
“ಕರ್ನಾಟಕದಲ್ಲಿ ಒಂದು ನಿಲುವು, ತಮಿಳುನಾಡಿನಲ್ಲಿ ಮತ್ತೊಂದು ನಿಲುವು. ಕಾಂಗ್ರೆಸ್ಗೆ ತತ್ವವಿಲ್ಲ, ಸ್ಥಿರತೆಯಿಲ್ಲ, ವಿಶ್ವಾಸಾರ್ಹತೆಯಿಲ್ಲ” ಎಂದು ಅವರು ಟೀಕಿಸಿದ್ದಾರೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದ ಬೆಳವಣಿಗೆ ಕೇವಲ ಒಂದು ಯೋಜನೆಗೆ ಮಾಡಿದ ದ್ರೋಹವಲ್ಲ; ಇದು ಕರ್ನಾಟಕದ ರೈತರಿಗೆ, ರಾಜ್ಯದ ಜಲ ಭದ್ರತೆಗೆ ಹಾಗೂ ಭವಿಷ್ಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
“ಕರ್ನಾಟಕದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜ್ಯದ ಪರವಾಗಿ ಯಾರು ನಿಂತರು ಮತ್ತು ಮೈತ್ರಿ ರಾಜಕೀಯಕ್ಕಾಗಿ ರಾಜ್ಯದ ಹಿತಾಸಕ್ತಿಗಳನ್ನು ಯಾರು ಮಾರಿದರು ಎಂಬುದನ್ನು ಜನರು ನೆನಪಿಟ್ಟುಕೊಳ್ಳಲಿದ್ದಾರೆ” ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.