
ಪಾಟ್ನಾ, 07 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸಮ್ಮುಖದಲ್ಲಿ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಭವ್ಯ ಸಮಾರಂಭದಲ್ಲಿ ಬಿಹಾರದ ಸಾಮ್ರಾಟ್ ಸಚಿವ ಸಂಪುಟ ವಿಸ್ತರಣೆ ನೆರವೇರಿತು. ಈ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ 15 ಮಂದಿ ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ವತಿಯಿಂದ 12 ಮಂದಿ ಸೇರಿದಂತೆ ಒಟ್ಟು 31 ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಇದರೊಂದಿಗೆ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕೋಟಾದಿಂದ ಇಬ್ಬರು, ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ಹಾಗೂ ರಾಷ್ಟ್ರೀಯ ಲೋಕ ಮೋರ್ಚಾ (ಆರ್ಎಲ್ಎಂ) ಪಕ್ಷಗಳಿಂದ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.
ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ವಿಜಯ್ ಚೌಧರಿ ಹಾಗೂ ಬಿಜೇಂದ್ರ ಪ್ರಸಾದ್ ಯಾದವ್ ಉಪ ಮುಖ್ಯಮಂತ್ರಿಗಳಾಗಿ ಸ್ಥಾನ ಪಡೆದಿದ್ದಾರೆ.
ಬಿಜೆಪಿಯಿಂದ ಪ್ರಮುಖ ಸಚಿವರು
ಬಿಜೆಪಿ ಕೋಟಾದಲ್ಲಿ ರಾಮ್ ಕೃಪಾಲ್ ಯಾದವ್, ಕೇದಾರ್ ಗುಪ್ತ, ನಿತೀಶ್ ಮಿಶ್ರಾ, ಮಿಥಿಲೇಶ್ ತಿವಾರಿ, ರಾಮ ನಿಷಾದ್, ವಿಜಯ್ ಕುಮಾರ್ ಸಿನ್ಹಾ, ದಿಲೀಪ್ ಜೈಸ್ವಾಲ್, ಪ್ರಮೋದ್ ಚಂದ್ರವಂಶಿ, ಲಖೇಂದ್ರ ಪಾಸ್ವಾನ್, ಸಂಜಯ್ ಟೈಗರ್, ಇಂಜಿನಿಯರ್ ಕುಮಾರ್ ಶೈಲೇಂದ್ರ, ನಂದ ಕಿಶೋರ್ ರಾಮ್, ರಾಮಚಂದ್ರ ಪ್ರಸಾದ್, ಅರುಣ್ ಶಂಕರ್ ಪ್ರಸಾದ್ ಹಾಗೂ ಶ್ರೇಯಸಿ ಸಿಂಗ್ ಅವರಿಗೆ ಸಚಿವ ಸ್ಥಾನ ಲಭಿಸಿದೆ.
ಜೆಡಿಯು ಸಚಿವರು
ಜೆಡಿಯು ಕೋಟಾದಿಂದ ನಿಶಾಂತ್ ಕುಮಾರ್, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೇಸಿ ಸಿಂಗ್, ಮದನ್ ಸಾಹ್ನಿ, ಸುನಿಲ್ ಕುಮಾರ್, ಜಮಾ ಖಾನ್, ಭಗವಾನ್ ಸಿಂಗ್ ಕುಶ್ವಾಹ, ಶೀಲಾ ಮಂಡಲ್, ದಾಮೋದರ್ ರೂಟ್, ಬುಲೋ ಮಂಡಲ್ ಹಾಗೂ ರತ್ನೇಶ್ ಸದಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಿತ್ರಪಕ್ಷಗಳಿಗೊ ಅವಕಾಶ
ಲೋಕ ಜನಶಕ್ತಿ ಪಕ್ಷ (ಆರ್) ವತಿಯಿಂದ ಸಂಜಯ್ ಪಾಸ್ವಾನ್ ಹಾಗೂ ಸಂಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ದೊರೆತಿದೆ. ಎಚ್ಎಎಂ ಪಕ್ಷದಿಂದ ಸಂತೋಷ್ ಮಾಂಝಿ ಹಾಗೂ ರಾಷ್ಟ್ರೀಯ ಲೋಕ ಮೋರ್ಚಾದಿಂದ ದೀಪಕ್ ಪ್ರಕಾಶ್ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಜಾತಿ ಸಮೀಕರಣಕ್ಕೆ ಮಹತ್ವ
ಹೊಸ ಸಚಿವ ಸಂಪುಟದಲ್ಲಿ ಜಾತಿ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಬಿಜೆಪಿ ತನ್ನ ಪರಂಪರಯಾದ ಮೇಲ್ಜಾತಿ ಮತ ಬ್ಯಾಂಕ್ ಜೊತೆಗೆ ವೈಶ್ಯ, ಯಾದವ್, ನಿಶಾದ್, ಪಾಸ್ವಾನ್ ಹಾಗೂ ರವಿದಾಸ್ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ.
ವೈಶ್ಯ ಸಮುದಾಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿರುವುದು ಗಮನ ಸೆಳೆದಿದ್ದು, ಸೂಡಿ, ಕಲ್ವಾರ್, ಕನು ಹಾಗೂ ತೈಲ ವ್ಯಾಪಾರಿ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವ್ಯಾಪಾರ ವರ್ಗವನ್ನು ಆಕರ್ಷಿಸುವ ರಾಜಕೀಯ ಲೆಕ್ಕಾಚಾರ ಸ್ಪಷ್ಟವಾಗಿದೆ.
ದಲಿತ ಸಮುದಾಯದಿಂದ ಒಟ್ಟು ಏಳು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಪಾಸ್ವಾನ್, ರವಿದಾಸ್, ಮುಸಾಹರ್ ಹಾಗೂ ಪಾಸಿ ಸಮುದಾಯಗಳಿಗೆ ಪ್ರತಿನಿಧಿತ್ವ ನೀಡುವ ಮೂಲಕ ದಲಿತ ಮತ ಬ್ಯಾಂಕ್ ಬಲಪಡಿಸುವ ಪ್ರಯತ್ನ ಮೈತ್ರಿಕೂಟದಿಂದ ನಡೆದಿದೆ.
ಇದಲ್ಲದೆ, ಮುಸ್ಲಿಂ ಸಮುದಾಯದಿಂದ ಜಮಾ ಖಾನ್ ಒಬ್ಬರಿಗಷ್ಟೇ ಸಚಿವ ಸ್ಥಾನ ಲಭಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಮುಂದಿನ ವಿಧಾನ ಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಸಮೀಕರಣ, ಪ್ರಾದೇಶಿಕ ಪ್ರತಿನಿಧಿತ್ವ ಹಾಗೂ ಮತ ಬ್ಯಾಂಕ್ ರಾಜಕಾರಣವನ್ನು ಸಮತೋಲನಗೊಳಿಸುವ ಉದ್ದೇಶದಿಂದ ಸಚಿವ ಸಂಪುಟ ರಚನೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa