
ನವದೆಹಲಿ, 02 ಮೇ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ವಿಪತ್ತು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ತ್ವರಿತವಾಗಿ ಮಾಹಿತಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಮೊಬೈಲ್ ಪ್ರಸಾರ ಆಧಾರಿತ ಎಚ್ಚರಿಕೆ ವ್ಯವಸ್ಥೆ’ಯ ಪ್ರಯೋಗವನ್ನು ಇಂದು ಯಶಸ್ವಿಯಾಗಿ ನಡೆಸಿದೆ.
ಈ ವ್ಯವಸ್ಥೆಯಡಿಯಲ್ಲಿ, ಎಲ್ಲ ರೀತಿಯ ಮೊಬೈಲ್ ಸಾಧನಗಳ ಪರದೆ ಮೇಲೆ ತುರ್ತು ಸಂದೇಶವು ವಿಶೇಷ ಧ್ವನಿ ಸೂಚನೆಯೊಂದಿಗೆ ಏಕಕಾಲದಲ್ಲಿ ಕಾಣಿಸಿಕೊಂಡಿತು. ಸಂದೇಶವು ಗಮನ ಸೆಳೆಯುವಂತೆ ಸಾಧನವು ಕಂಪಿಸುವ ವ್ಯವಸ್ಥೆಯೂ ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೇಶವ್ಯಾಪಿ ಪ್ರಯೋಗವನ್ನು ಪ್ರಾರಂಭಿಸಿದರು.
ಪರೀಕ್ಷೆಯ ಭಾಗವಾಗಿ ಬೆಳಿಗ್ಗೆ ಸುಮಾರು 11.45ರ ವೇಳೆಗೆ ದೇಶದಾದ್ಯಂತ ಮೊಬೈಲ್ ಬಳಕೆದಾರರಿಗೆ ಏಕಕಾಲದಲ್ಲಿ ತುರ್ತು ಎಚ್ಚರಿಕೆ ಸಂದೇಶ ತಲುಪಿತು. ಇದು ಕೇವಲ ಪರೀಕ್ಷೆ ಮಾತ್ರವಾಗಿದ್ದು, ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ಈ ಅತ್ಯಾಧುನಿಕ ವ್ಯವಸ್ಥೆಯನ್ನು ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ದೂರಸಂಪರ್ಕ ಇಲಾಖೆಯ ಸಂಶೋಧನಾ ಕೇಂದ್ರ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ ರೂಪಿಸಿದ ಸಮಗ್ರ ಎಚ್ಚರಿಕೆ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೊಳಿಸಲಾಗಿದ್ದು, ಇದು ಸಾಮಾನ್ಯ ಎಚ್ಚರಿಕೆ ಕ್ರಮವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
ಈ ವ್ಯವಸ್ಥೆ ಈಗಾಗಲೇ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭೌಗೋಳಿಕವಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಮೊಬೈಲ್ ಬಳಕೆದಾರರಿಗೆ ಕಿರುಸಂದೇಶಗಳ ಮೂಲಕ ತುರ್ತು ಎಚ್ಚರಿಕೆಗಳನ್ನು ನೀಡುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ನೈಸರ್ಗಿಕ ವಿಕೋಪಗಳು ಹಾಗೂ ಹವಾಮಾನ ಎಚ್ಚರಿಕೆ ಸಂದರ್ಭಗಳಲ್ಲಿ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಅನೇಕ ಕೋಟಿ ಕಿರುಸಂದೇಶಗಳನ್ನು ರವಾನಿಸಲಾಗಿದೆ.
ಇತ್ತೀಚೆಗೆ ಸೇರಿಸಲಾದ ಮೊಬೈಲ್ ಪ್ರಸಾರ ತಂತ್ರಜ್ಞಾನವು ನಿರ್ದಿಷ್ಟ ಪ್ರದೇಶದಲ್ಲಿರುವ ಎಲ್ಲಾ ಸಾಧನಗಳಿಗೆ ಏಕಕಾಲದಲ್ಲಿ ಎಚ್ಚರಿಕೆ ಸಂದೇಶ ಕಳುಹಿಸುವ ಸಾಮರ್ಥ್ಯ ಹೊಂದಿದ್ದು, ನೈಜ ಸಮಯದಲ್ಲಿ ಮಾಹಿತಿ ತಲುಪಿಸಲು ನೆರವಾಗುತ್ತದೆ.
ಸುನಾಮಿ, ಭೂಕಂಪ, ಮಿಂಚು, ಅನಿಲ ಸೋರಿಕೆ, ರಾಸಾಯನಿಕ ಅಪಾಯಗಳು ಹಾಗೂ ಯುದ್ಧ ಪರಿಸ್ಥಿತಿಗಳಂತಹ ತುರ್ತು ಸಂದರ್ಭಗಳಲ್ಲಿ ಈ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಲಿದೆ.
ಪ್ರಥಮ ಹಂತದ ಪರೀಕ್ಷೆಯ ಭಾಗವಾಗಿ, ರಾಜ್ಯ ರಾಜಧಾನಿಗಳಲ್ಲಿ ವಿವಿಧ ಭಾಷೆಗಳಲ್ಲಿ ಸಂದೇಶ ಕಳುಹಿಸಲಾಗಿತ್ತು. ಆರಂಭದಲ್ಲಿ ಕೆಲವು ಕಡೆ ಗೊಂದಲ ಉಂಟಾದರೂ, ಇದು ಪರೀಕ್ಷೆ ಎಂದು ತಿಳಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.
ಈ ಕ್ರಮವನ್ನು “ಎಚ್ಚರಿಕೆಯ ನಾಗರಿಕ – ಸುರಕ್ಷಿತ ರಾಷ್ಟ್ರ”ದತ್ತದ ಮಹತ್ವದ ಹೆಜ್ಜೆ ಎಂದು ಸರ್ಕಾರ ಬಣ್ಣಿಸಿದೆ. ಇಂತಹ ಪರೀಕ್ಷಾ ಸಂದೇಶಗಳ ಬಗ್ಗೆ ಗಾಬರಿಯಾಗದೆ, ಇದು ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನವೆಂದು ತಿಳಿದುಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa