


ರಾಂಚಿ, 16 ಮೇ (ಹಿ.ಸ.) :
ಆ್ಯಂಕರ್ : ಪ್ರವಾಸೋದ್ಯಮ, ಕೈಗಾರಿಕೆ, ಕಲ್ಲಿದ್ದಲು, ಗಾರ್ಮೆಂಟ್ಸ್ ಹಾಗೂ ಕೃಷಿ - ತೋಟಗಾರಿಕೆ ಕ್ಷೇತ್ರಗಳ ವ್ಯಾಪಾರ ಮತ್ತು ವಹಿವಾಟು ವಿಸ್ತರಣೆಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ (BDCC&I) ಹಾಗೂ ಫೆಡರೇಶನ್ ಆಫ್ ಜಾರ್ಖಂಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FJCCI) ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್, ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶ್ಬಾಬು ಹಾಗೂ ಫೆಡರೇಶನ್ ಆಫ್ ಜಾರ್ಖಂಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿನ ಅಧ್ಯಕ್ಷರಾದ ಆದಿತ್ಯ ಮಲ್ಹೋತ್ರಾ, ಪ್ರಧಾನ ಕಾರ್ಯದರ್ಶಿಗಳಾದ ರೋಹಿತ್ ಅಗರವಾಲ್ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶ್ಬಾಬು ಅವರು, ಬಳ್ಳಾರಿ ಜಿಲ್ಲೆ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಜಾರ್ಖಂಡ್ ರಾಜ್ಯದ ಉದ್ಯಮಿಗಳು ಭೇಟಿ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡಲಾಗಿದೆ ಎಂದರು.
ಕೈಗಾರಿಕೆಗಳಿಗೆ ಅಗತ್ಯವಿರುವ ಕಲ್ಲಿದ್ದಲು ಪೂರೈಕೆ, ರೆಡಿಮೇಡ್ ಗಾರ್ಮೆಂಟ್ಸ್ ಮತ್ತು ಜೀನ್ಸ್ ಉದ್ಯಮ, ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು, ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಮೆಣಸಿನಕಾಯಿ, ಹತ್ತಿ, ಪುಷ್ಪಕೃಷಿ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ಅಂಶಗಳನ್ನು ಒಪ್ಪಂದದಲ್ಲಿ ಒಳಗೊಂಡಿದೆ ಎಂದು ತಿಳಿಸಿದರು.
ಈ ಜಂಟಿ ಒಪ್ಪಂದದ ಮೂಲಕ ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳ ನಡುವೆ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಫೆಡರೇಶನ್ ಆಫ್ ಜಾರ್ಖಂಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿನ ಅಧ್ಯಕ್ಷರಾದ ಆದಿತ್ಯ ಮಲ್ಹೋತ್ರಾ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರೋಹಿತ್ ಅಗರವಾಲ್ ಅವರು ಮಾತನಾಡಿ, ಬಿಡಿಸಿಸಿಐ ಜೊತೆಗಿನ ಈ ವಾಣಿಜ್ಯ ಮತ್ತು ಕೈಗಾರಿಕಾ ಒಪ್ಪಂದವು ಉಭಯ ರಾಜ್ಯಗಳ ನಡುವಿನ ವ್ಯಾಪಾರಿಕ ಸಂಬಂಧಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳ ನಡುವಿನ ಕೈಗಾರಿಕಾ ಮತ್ತು ವಾಣಿಜ್ಯ ಸಹಕಾರವನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಒಪ್ಪಂದ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶ್ಬಾಬು ಅವರು ಗಾರ್ಮೆಂಟ್ಸ್ ಕ್ಷೇತ್ರ ಕುರಿತು, ಎಸ್ಡಿಸಿ ಸಿಇಒ ಡಾ. ಡಿ.ಎಲ್. ರಮೇಶ್ಗೋಪಾಲ್ ಅವರು ಕೌಶಲ್ಯಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕುರಿತು, ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್ ಅವರು ಕೃಷಿ ಮತ್ತು ತೋಟಗಾರಿಕೆ ಕುರಿತು, ಸಿಎ ಕೆ. ರಾಜಶೇಖರ್ ಅವರು ಗಣಿಗಾರಿಕೆ ಕುರಿತು, ಎಸ್.ಪಿ. ವೆಂಕಟೇಶ್ ಅವರು ಸ್ಪಾಂಜ್ ಐರನ್ ಮತ್ತು ಕಲ್ಲಿದ್ದಲು ಬೇಡಿಕೆ ಕುರಿತು, ಹ್ಯಾಲೀಸ್ ಬ್ಲೂ ಸಂಸ್ಥೆಯ ಕೆ.ಎಂ. ಶಿವಮೂರ್ತಿ ಅವರು ಫ್ಯಾಬ್ರಿಕೇಷನ್ ಕ್ಷೇತ್ರ ಕುರಿತು ವಿಚಾರ ಮಂಡಿಸಿದರು.
ಜಾರ್ಖಂಡ್ ರಾಜ್ಯದ ಕೈಗಾರಿಕೆಗಳ ಇಲಾಖೆಯ ಕಾರ್ಯದರ್ಶಿಗಳಾದ ಅರ್ವಾ ರಾಜಕಮಲ್ ಮತ್ತು ನಿರ್ದೇಶಕರಾದ ವಿಶಾಲ್ ಸಾಗರ್ ಉಪಸ್ಥಿತರಿದ್ದರು ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಒಪ್ಪಂದವು ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳ ನಡುವಿನ ವ್ಯಾಪಾರ ಹಾಗೂ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಉಭಯ ಸಂಸ್ಥೆಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿಐನ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್