
ನವದೆಹಲಿ, 14 ಮೇ (ಹಿ.ಸ.) :
ಆ್ಯಂಕರ್ : ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಚ್ಚಾ, ಬಿಳಿ ಹಾಗೂ ಸಂಸ್ಕರಿಸಿದ ಸಕ್ಕರೆಯ ರಫ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಿದೆ. ಈ ನಿಷೇಧವು ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರಲಿದೆ.
ಈ ಕುರಿತು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಮೇ 13ರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಸಕ್ಕರೆಯ ರಫ್ತು ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಐಟಿಸಿ ಕೋಡ್ 1701 14 90 ಮತ್ತು 1701 99 90 ಅಡಿಯಲ್ಲಿ ಬರುವ ಸಕ್ಕರೆಯನ್ನು “ನಿರ್ಬಂಧಿತ” ವರ್ಗದಿಂದ “ನಿಷೇಧಿತ” ವರ್ಗಕ್ಕೆ ವರ್ಗಾಯಿಸಲಾಗಿದೆ.
ಈ ಆದೇಶವು ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ ಮತ್ತು ಸಂಸ್ಕರಿಸಿದ ಸಕ್ಕರೆಯ ರಫ್ತಿಗೆ ಅನ್ವಯವಾಗಲಿದೆ. ಆದರೆ, ಮುಂಗಡ ದೃಢೀಕರಣ ಯೋಜನೆ ಅಡಿಯಲ್ಲಿ ಸಿಎಕ್ಸ್ಎಲ್ ಮತ್ತು ಟಿಆರ್ಕ್ಯೂ ಕೋಟಾಗಳ ಮೂಲಕ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಕ್ಕೆ ರಫ್ತು ಮಾಡುವ ಸಕ್ಕರೆ, ಜೊತೆಗೆ ಇತರ ರಾಷ್ಟ್ರಗಳ ಆಹಾರ ಭದ್ರತಾ ಅಗತ್ಯಗಳಿಗಾಗಿ ಸರ್ಕಾರದಿಂದ ಸರ್ಕಾರಕ್ಕೆ ನಡೆಯುವ ರವಾನೆಗಳಿಗೆ ವಿನಾಯಿತಿ ನೀಡಲಾಗಿದೆ.
ಇದಕ್ಕೂ ಹೊರತಾಗಿ, ಈಗಾಗಲೇ ರಫ್ತು ಪ್ರಕ್ರಿಯೆಯಲ್ಲಿ ಇರುವ ಸರಕುಗಳಿಗೂ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸೆಪ್ಟೆಂಬರ್ ನಂತರ ಈ ಆದೇಶವನ್ನು ವಿಸ್ತರಿಸದಿದ್ದರೆ, ಸಕ್ಕರೆಯ ರಫ್ತು ನೀತಿ ಮತ್ತೆ “ನಿರ್ಬಂಧಿತ” ವರ್ಗಕ್ಕೆ ಮರಳಲಿದೆ ಎಂದು ತಿಳಿಸಲಾಗಿದೆ.
ಗಮನಾರ್ಹವಾಗಿ, ಕೇಂದ್ರ ಸರ್ಕಾರವು ಈ ಹಿಂದೆ ಸಕ್ಕರೆ ಕಾರ್ಖಾನೆಗಳಿಗೆ 15.9 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಅನುಮತಿ ನೀಡಿತ್ತು. ಆದರೆ, ಸತತ ಎರಡನೇ ವರ್ಷವೂ ದೇಶದಲ್ಲಿ ಸಕ್ಕರೆ ಉತ್ಪಾದನೆ ಬಳಕೆಗೆ ಹೋಲಿಸಿದರೆ ಕಡಿಮೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಪ್ರಮುಖ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಕುಸಿತ ಕಂಡುಬಂದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.