
ಬೆಂಗಳೂರು, 15 ಮೇ (ಹಿ.ಸ.) :
ಆ್ಯಂಕರ್ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂಧನ ದರ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿಫಲ ವಿದೇಶಾಂಗ ನೀತಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ನರೇಂದ್ರ ಮೋದಿ ಅವರ ಕೊಡುಗೆ” ಎಂದು ಲೇವಡಿ ಮಾಡಿದರು. ಬೇರೆ ರಾಷ್ಟ್ರಗಳೊಂದಿಗೆ ಸಮರ್ಪಕ ಸಂಬಂಧ ಕಾಪಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅದರ ಪರಿಣಾಮವಾಗಿ ಇಂಧನ ದರಗಳು ಏರಿಕೆಯಾಗುತ್ತಿವೆ ಎಂದು ದೂರಿದರು.
ಜನರು ತಮ್ಮ ದುಡಿಮೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್, “ಚಿನ್ನ ಖರೀದಿಸಬೇಡಿ, ಎಣ್ಣೆ ಬಳಸಬೇಡಿ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಮಾಂಗಲ್ಯ ಸರ ಪ್ರತಿಯೊಬ್ಬರಿಗೂ ಅಗತ್ಯ. ಅದನ್ನು ತೆಗೆದುಕೊಳ್ಳಬೇಡಿ ಎಂದು ಹೇಗೆ ಹೇಳಲು ಸಾಧ್ಯ? ಇವೆಲ್ಲವೂ ಅವಾಸ್ತವಿಕ ಮಾತುಗಳು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಬಿಡದಿ ಟೌನ್ಶಿಪ್ ಯೋಜನೆ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗಳಿಗೂ ಡಿಸಿಎಂ ತಿರುಗೇಟು ನೀಡಿದರು.
“ನಾನು ಬಿಡದಿಗೆ ಹೋಗುತ್ತೇನೆ. ರೈತರು ನನ್ನ ವಿರುದ್ಧ ಘೋಷಣೆ ಕೂಗಬಹುದು, ಕಲ್ಲು ತೂರಾಟವೂ ಮಾಡಬಹುದು. ಅದಕ್ಕೆ ನಾನು ಹೆದರುವುದಿಲ್ಲ. ಕುಮಾರಸ್ವಾಮಿಯವರು ಈ ಹಿಂದೆ ಆರಂಭಿಸಿದ್ದ ಕೆಲಸವನ್ನೇ ನಾನು ಮುಂದುವರಿಸುತ್ತಿದ್ದೇನೆ” ಎಂದು ಹೇಳಿದರು.
ಈ ವಿಷಯದ ಕುರಿತು ಬಹಿರಂಗ ಚರ್ಚೆಗೆ ದಿನಾಂಕ ನಿಗದಿ ಮಾಡಿದರೆ ತಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.