
ಬಾಗಲಕೋಟೆ, 01 ಮೇ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪ್ರಸಿದ್ಧ ಶೂರ್ಪಾಲಯ ಕ್ಷೇತ್ರದಲ್ಲಿ ನರಸಿಂಹ ಜಯಂತಿ ಅಂಗವಾಗಿ ಶ್ರೀ ನರಸಿಂಹ ದೇವರ ವಾಹನೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿದವು.
ಉತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ರದ್ದಿಯು ಹೆಚ್ಚಾಗಿದ್ದು, ದೂರದೂರಿನಿಂದ ಭಕ್ತರು ಆಗಮಿಸಿ ಶ್ರೀ ನರಸಿಂಹ ದೇವರ ದರ್ಶನ ಪಡೆದರು. ಭಜನೆ, ಕೀರ್ತನೆಗಳೊಂದಿಗೆ ಧಾರ್ಮಿಕ ವಾತಾವರಣ ಉಂಟಾಗಿತ್ತು.
ಬೆಳಗಿನ ವೇಳೆ ನಡೆದ ವಾಹನೋತ್ಸವದಲ್ಲಿ ಅಲಂಕೃತ ವಾಹನದಲ್ಲಿ ಶ್ರೀ ನರಸಿಂಹ ದೇವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಹರಿದುಬಂದು “ಗೋವಿಂದ” “ನರಸಿಂಹ” ಜಯಘೋಷಗಳನ್ನು ಕೂಗುತ್ತ ಭಕ್ತಿ ಸಾಗರದಲ್ಲಿ ತೇಲಿದರು. ವಿವಿಧ ಸಾಂಪ್ರದಾಯಿಕ ವಾದ್ಯಗಳ ನಾದ, ಡೊಳ್ಳು–ತಾಳಗಳ ಘೋಷದಿಂದ ಉತ್ಸವಕ್ಕೆ ಮತ್ತಷ್ಟು ಮೆರುಗು ತುಂಬಿತು.
ಅದರ ಜೊತೆಗೆ ಪಲ್ಲಕ್ಕಿ ಉತ್ಸವವೂ ಅದ್ದೂರಿಯಾಗಿ ನಡೆಯಿತು. ಹೂವುಗಳಿಂದ ಸಿಂಗಾರಿಸಿದ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯನ್ನು ಹೊತ್ತುಕೊಂಡು ಭಕ್ತರು ಭಕ್ತಿ ಭಾವದಿಂದ ಸಾಗಿದರು. ಮಹಿಳೆಯರು ಕಳಶ ಹೊತ್ತು ಭಾಗವಹಿಸಿದ್ದು ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು.
ಉತ್ಸವದ ನಿಮಿತ್ತ ಸ್ಥಳೀಯ ಆಡಳಿತದಿಂದ ಸೂಕ್ತ ಭದ್ರತಾ ಹಾಗೂ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ಪ್ರಸಾದ ವಿತರಣೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮವು ಭಕ್ತರ ಮನಸ್ಸಿಗೆ ಆತ್ಮೀಯತೆ ಹಾಗೂ ಆಧ್ಯಾತ್ಮಿಕತೆಯ ಸ್ಪಂದನ ನೀಡಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು
ಹಿಂದೂಸ್ತಾನ್ ಸಮಾಚಾರ್ / jyothi deshpande