
ಕೋಲಾರ, ೦೬ ಮಾರ್ಚ್ (ಹಿ.ಸ)
ಆಂಕರ್ : ಕೋಲಾರ ತಾಲ್ಲೂಕಿನ ಇರಗಸಂದ್ರ ಗ್ರಾಮದ ಪ್ರತಿಭಾವಂತ ಯುವಕ ಎ. ಮಧು ಅವರು ಯುಪಿಎಸ್ಸಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ೪೩೬ನೇ ರ್ಯಾಂಕ್ ಪಡೆದು ಯುಪಿಎಸ್ಸಿ ಆಯ್ಕೆ ಮಾಡುವ ಕೇಂದ್ರ ಸರ್ಕಾರದ ಕ್ಲಾಸ್ ಒನ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಎ. ಮಧು ಅವರು ಇರಗಸಂದ್ರ ಗ್ರಾಮದ ಆನಂದ್.ಎನ್ ಹಾಗೂ ಟಿ.ಸಿ. ಸುಶೀಲಮ್ಮ ದಂಪತಿಗಳ ಪುತ್ರರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪಡೆದಿದ್ದರು.
ತಮ್ಮ ಪರಿಶ್ರಮ, ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲವಾಗಿ ಯುಪಿಎಸ್ಸಿ ಎಂಬ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಎ. ಮಧು ಅವರ ಸಾಧನೆ ಕೋಲಾರ ಜಿಲ್ಲೆಯ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ ಎಂದು ದ್ರಾವಿಡ ಸಂಘದ ಅಧ್ಯಕ್ಷ ಅನಂತ ಕೀರ್ತಿ ಅಭಿನಂದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್