
ನವದೆಹಲಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮ್ಯಾನ್ಮಾರ್ನ ಯಾಂಗೋನ್ ನಲ್ಲಿ ಸರ್ಸೋಬೆಕ್ಮನ್ ಸಾಹಿತ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾದ ಈ ಕೇಂದ್ರವು ಭಾರತ–ಮ್ಯಾನ್ಮಾರ್ ಬಾಂಧವ್ಯದ ಸಂಕೇತವಾಗಿದ್ದು, ಮ್ಯಾನ್ಮಾರ್ನ ಸಾಹಿತ್ಯ ಪರಂಪರೆ ಮತ್ತು ಸೃಜನಶೀಲ ಬರವಣಿಗೆಯ ಸಂರಕ್ಷಣೆಗೆ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದರು.
ಭಾರತ ಮತ್ತು ಮ್ಯಾನ್ಮಾರ್ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯವು. ಆಧ್ಯಾತ್ಮಿಕತೆ, ಭಾಷೆ, ಸಾಹಿತ್ಯ ಮತ್ತು ಭೌಗೋಳಿಕ ಸಾಮೀಪ್ಯ ಎರಡೂ ದೇಶಗಳನ್ನು ಬೆಸೆಯುತ್ತವೆ. ಬೌದ್ಧಧರ್ಮ ಮತ್ತು ಪಾಲಿ ಭಾಷೆಯ ಮೂಲಕ ಹಂಚಿಕೆಯ ಬೌದ್ಧಿಕ ಪರಂಪರೆ ವಿಕಸಿತವಾಗಿದೆ ಎಂದು ಜೈಶಂಕರ್ ಹೇಳಿದರು. ‘ರಾಮಾಯಣ’, ‘ಭಗವದ್ಗೀತೆ’ ಮತ್ತು ‘ತಿರುಕ್ಕುರಲ್’ ಮೊದಲಾದ ಭಾರತೀಯ ಗ್ರಂಥಗಳ ಬರ್ಮೀಸ್ ಅನುವಾದಗಳು ಮ್ಯಾನ್ಮಾರ್ನಲ್ಲಿ ಜನಪ್ರಿಯವಾಗಿವೆ ಎಂದರು.
ಸರ್ಸೋಬೆಕ್ಮನ್ ಕೇಂದ್ರವು ಶಾಸ್ತ್ರೀಯ ಹಾಗೂ ಜಾನಪದ ಸಾಹಿತ್ಯದ ಸಂರಕ್ಷಣೆ, ಅನುವಾದ, ಆರ್ಕೈವಿಂಗ್ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಇದರಿಂದ ಹೊಸ ಪೀಳಿಗೆ ತಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ನಂಟು ಬೆಸೆಯಲು ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.
ಮ್ಯಾನ್ಮಾರ್ ಭಾರತದೆಡೆಗಿನ ಇಂಡೋ-ಪೆಸಿಫಿಕ್ ಆದ್ಯತೆಗಳಾದ ‘ನೈಬರ್ಹುಡ್ ಫಸ್ಟ್’ ಮತ್ತು ‘ಆಕ್ಟ್ ಈಸ್ಟ್’ ನೀತಿಗಳ ಸಂಗಮದಲ್ಲಿದೆ. ರಾಜಕೀಯ, ವ್ಯಾಪಾರ, ಭದ್ರತೆ ಹಾಗೂ ಸಾಂಸ್ಕೃತಿಕ ಸಹಕಾರ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಿಸ್ತರಿಸುತ್ತಿದೆ ಎಂದರು. ಸಂಪರ್ಕ ಯೋಜನೆಗಳಾದ ಕಲಾದನ್ ಮಲ್ಟಿಮೋಡಲ್ ಸಾರಿಗೆ ಯೋಜನೆ ಮತ್ತು ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿಗಳನ್ನು ಪ್ರಮುಖ ಉಪಕ್ರಮಗಳೆಂದು ಉಲ್ಲೇಖಿಸಿದರು. ಇವುಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದರಿಂದ ಪ್ರಾದೇಶಿಕ ಅಭಿವೃದ್ಧಿ ಮತ್ತು ಜನರಿಂದ ಜನರಿಗೆ ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ಹೇಳಿದರು.
ವಿಪತ್ತುಗಳ ಸಮಯದಲ್ಲೂ ಭಾರತ ಮ್ಯಾನ್ಮಾರ್ಗೆ ನೆರವು ನೀಡುತ್ತಿದೆ. ಮಾರ್ಚ್ 2025ರಲ್ಲಿ ಮಂಡಲೆಯಲ್ಲಿ ಸಂಭವಿಸಿದ ಭೂಕಂಪದ ಬಳಿಕ, ಆಪರೇಷನ್ ಬ್ರಹ್ಮ ಅಡಿಯಲ್ಲಿ ಸುಮಾರು 1,000 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ, 80 ಸದಸ್ಯರ ಶೋಧ–ರಕ್ಷಣಾ ತಂಡವನ್ನು ನಿಯೋಜಿಸಲಾಯಿತು. ಜೊತೆಗೆ 2,500 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ಷೇತ್ರ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು ಎಂದು ಜೈಶಂಕರ್ ವಿವರಿಸಿದರು.
ಭಾರತ ಮ್ಯಾನ್ಮಾರ್ನ ಶಾಂತಿ ಪ್ರಕ್ರಿಯೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಗಳ ಅನುಭವವನ್ನು ಹಂಚಿಕೊಳ್ಳುತ್ತಿದೆ. ಮ್ಯಾನ್ಮಾರ್ ನೇತೃತ್ವದ, ಎಲ್ಲರನ್ನೂ ಒಳಗೊಂಡ ಶಾಂತಿ ಪ್ರಕ್ರಿಯೆಯನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಸೋಬೆಕ್ಮನ್ ಮ್ಯಾನ್ಮಾರ್ನ ಪ್ರಮುಖ ಸಾಹಿತ್ಯ ಸಂಸ್ಥೆಯಾಗಿದ್ದು, ದೇಶದ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದೇ ಇದರ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa