
ಬಾಗಲಕೋಟೆ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಈ ಹಿನ್ನೆಲೆ ನವನಗರದ 27ನೇ ಸೆಕ್ಟರ್ನಲ್ಲಿ ಇಂದು ಬಿಜೆಪಿ ವತಿಯಿಂದ ಜನಸಂಪರ್ಕ ಹಾಗೂ ಪ್ರಚಾರ ಕಾರ್ಯ ಜೋರಾಗಿ ನಡೆಯಿತು.
ಈ ಪ್ರಚಾರದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾಗವಹಿಸಿ, ಸಾರ್ವಜನಿಕರನ್ನು ಭೇಟಿ ಮಾಡಿ ಪಕ್ಷದ ಪರ ಮತಯಾಚನೆ ಮಾಡಿದರು. ಈ ವೇಳೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.
ನವನಗರದ ಬೆಂಡಿಗೇರಿ ಅವರ ನಿವಾಸದಲ್ಲಿ ಸಮಾಜದ ಮುಖಂಡರು ಹಾಗೂ ಸ್ಥಳೀಯ ಬಾಂಧವರೊಂದಿಗೆ ಸಭೆ ನಡೆಸಿ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲಾಯಿತು. “ಬಾಗಲಕೋಟೆಯ ಸರ್ವತೋಮುಖ ಏಳಿಗೆಗಾಗಿ ಹಾಗೂ ಅಭಿವೃದ್ಧಿಯ ಪಥವನ್ನು ಮುಂದುವರಿಸಲು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಅಗತ್ಯ” ಎಂದು ನಾಯಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ, “ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ‘ಕಮಲ’ ಚಿಹ್ನೆಗೆ ಮತ ನೀಡಿ ಆಶೀರ್ವದಿಸಬೇಕು” ಎಂದು ಮನವಿ ಮಾಡಿದರು.
ನವನಗರದ ಜನತೆ ತೋರುತ್ತಿರುವ ಉತ್ಸಾಹಭರಿತ ಬೆಂಬಲ ಹಾಗೂ ಬಿಜೆಪಿಯ ಮೇಲಿನ ವಿಶ್ವಾಸವೇ ಈ ಉಪಚುನಾವಣೆಯಲ್ಲಿ ವಿಜಯದ ಭರವಸೆಯಾಗಿದೆ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa