ಕಾಶ್ಮೀರದ ಎತ್ತರ ಪ್ರದೇಶಗಳಲ್ಲಿ ಹೊಸ ಹಿಮಪಾತ: 214 ಪ್ರವಾಸಿಗರ ರಕ್ಷಣೆ, ಹಲವು ರಸ್ತೆಗಳು ಬಂದ್
ಶ್ರೀನಗರ, 16 ಮಾರ್ಚ್ (ಹಿ.ಸ.): ಆ್ಯಂಕರ್: ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಹಿಮಪಾತವಾಗಿದ್ದು, ಬಯಲು ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಹಲವು ಕಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭಾರೀ ಹಿಮಪಾತದಿಂದಾಗಿ ಸಿಲುಕಿಕೊಂಡಿದ್ದ ವಾಹನಗಳನ್ನು ಹೊರತೆಗೆದು ಜನರನ್ನು ರಕ್ಷಿಸಲು
ಕಾಶ್ಮೀರದ ಎತ್ತರ ಪ್ರದೇಶಗಳಲ್ಲಿ ಹೊಸ ಹಿಮಪಾತ: 214 ಪ್ರವಾಸಿಗರ ರಕ್ಷಣೆ, ಹಲವು ರಸ್ತೆಗಳು ಬಂದ್


ಶ್ರೀನಗರ, 16 ಮಾರ್ಚ್ (ಹಿ.ಸ.):

ಆ್ಯಂಕರ್:

ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಹಿಮಪಾತವಾಗಿದ್ದು, ಬಯಲು ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಹಲವು ಕಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭಾರೀ ಹಿಮಪಾತದಿಂದಾಗಿ ಸಿಲುಕಿಕೊಂಡಿದ್ದ ವಾಹನಗಳನ್ನು ಹೊರತೆಗೆದು ಜನರನ್ನು ರಕ್ಷಿಸಲು ಪೊಲೀಸರು ಮತ್ತು ಸೇನೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ದಕ್ಷಿಣ ಕಾಶ್ಮೀರದ ಸಿಂಥನ್ ಟಾಪ್ ನಲ್ಲಿ ಭಾರೀ ಹಿಮಪಾತದಿಂದ ಹಲವಾರು ವಾಹನಗಳು ಸಿಲುಕಿಕೊಂಡಿದ್ದು, ಭಾನುವಾರ ರಾತ್ರಿ ಪೊಲೀಸರು ಮತ್ತು ಸೇನೆಯು ಜಂಟಿ ಕಾರ್ಯಾಚರಣೆ ನಡೆಸಿ 214 ಪ್ರವಾಸಿಗರು ಹಾಗೂ ಸ್ಥಳೀಯರನ್ನು ಸುರಕ್ಷಿತವಾಗಿ ರಕ್ಷಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಗುಲ್ಮಾರ್ಗ, ಮಧ್ಯ ಕಾಶ್ಮೀರದ ದೂಧಪತ್ರಿ ಮತ್ತು ಸೋನಾಮಾರ್ಗ್ ಪ್ರವಾಸಿ ತಾಣಗಳಲ್ಲಿ ಮಧ್ಯಮ ಹಿಮಪಾತ ದಾಖಲಾಗಿದೆ. ಇದೇ ವೇಳೆ ಎತ್ತರ ಪ್ರದೇಶಗಳಾದ ಗುರೆಜ್ ವ್ಯಾಲಿ, ಸಾಧನಾ ಟಾಪ್ ಮತ್ತು ಮೊಘಲ್ ರಸ್ತೆ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಧನಾ ಟಾಪ್‌ನಲ್ಲಿ ಸುಮಾರು 12 ಇಂಚುಗಳಷ್ಟು ಹೊಸ ಹಿಮಪಾತವಾಗಿದ್ದರೆ, ಸಿಂಥನ್ ಟಾಪ್‌ನಲ್ಲಿ ಸುಮಾರು ಆರು ಇಂಚು ಹಿಮಪಾತ ದಾಖಲಾಗಿದೆ. ಇದರಿಂದ ಗುರೇಜ್-ಬಂಡಿಪೋರಾ ರಸ್ತೆ, ಸಿಂಥನ್-ಕಿಶ್ತ್ವಾರ್ ರಸ್ತೆ ಮತ್ತು ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಪರ್ಯಾಯ ಮಾರ್ಗವಾದ ಮೊಘಲ್ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಇದಲ್ಲದೆ ಝೋಜಿ ಲಾ ಪಾಸ್ ನಲ್ಲಿ ಹಿಮ ಸಂಗ್ರಹವಾಗಿರುವುದರಿಂದ ಶ್ರೀನಗರ–ಲೇಹ್ ಹೆದ್ದಾರಿ ನಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಶ್ರೀನಗರ ಸೇರಿದಂತೆ ಕಣಿವೆಯ ಬಯಲು ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆಯವರೆಗೆ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಶ್ರೀನಗರ ನಗರದಲ್ಲಿ 15.9 ಮಿ.ಮೀ ಮಳೆಯಾಗಿದೆ. ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರಗಳಲ್ಲಿ ಒಂದಾದ ಪಹ್ಲಗಾಮ್ ನಲ್ಲಿ 15.7 ಮಿ.ಮೀ ಮಳೆಯಾಗಿದೆ.

ಕೆಟ್ಟ ಹವಾಮಾನದಿಂದಾಗಿ ಕಣಿವೆಯಾದ್ಯಂತ ತಾಪಮಾನದಲ್ಲೂ ಕುಸಿತ ಕಂಡುಬಂದಿದೆ. ಶ್ರೀನಗರದಲ್ಲಿ ಭಾನುವಾರ ಗರಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಾರ್ಚ್ 20ರವರೆಗೆ ಕಣಿವೆಯಲ್ಲಿ ಅನಿಯಮಿತ ಹವಾಮಾನ ಮುಂದುವರಿಯಲಿದೆ. ಸೋಮವಾರ ಮತ್ತು ಮಂಗಳವಾರ ಎತ್ತರದ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಲಘು ಹಿಮಪಾತ ಅಥವಾ ಮಳೆಯಾಗುವ ಸಾಧ್ಯತೆಯಿದೆ. ಮಾರ್ಚ್ 18ರಿಂದ 20ರವರೆಗೆ ಹಲವೆಡೆ ಮಧ್ಯಂತರವಾಗಿ ಲಘು–ಮಧ್ಯಮ ಮಳೆ ಅಥವಾ ಹಿಮಪಾತ ಸಂಭವಿಸುವ ಸಾಧ್ಯತೆಯಿದೆ.

ಇದಲ್ಲದೆ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40–50 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮಾರ್ಚ್ 20ರವರೆಗೆ ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ರೈತರಿಗೆ ಸಲಹೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande