
ನವದೆಹಲಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದಕ್ಷಿಣ ಅಮೆರಿಕದ ಅತಿ ಎತ್ತರದ ಶಿಖರ ಹಾಗೂ ಏಷ್ಯಾದ ಹೊರಗಿನ ವಿಶ್ವದ ಅತ್ಯುನ್ನತ ಪರ್ವತವಾದ ಅರ್ಜೆಂಟೀನಾದ ಮೌಂಟ್ ಅಕಾನ್ಕಾಗುವಾ (6,961 ಮೀ.) ಅನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಭಾರತೀಯ ಪರ್ವತಾರೋಹಿಗಳ ಜಂಟಿ ಯಾತ್ರೆಯು ಗುರುವಾರ ನವದೆಹಲಿಯ ಸೌತ್ ಬ್ಲಾಕ್ನಿಂದ ಆರಂಭವಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ದಂಡಯಾತ್ರೆಗೆ ಅಧಿಕೃತ ಚಾಲನೆ ನೀಡಿದರು.
ಫೆಬ್ರವರಿ 6ರಿಂದ ಆರಂಭವಾಗುವ ಈ ದಂಡಯಾತ್ರೆ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ಜಂಟಿ ದಂಡಯಾತ್ರೆಯನ್ನು ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆ ಹಾಗೂ ಪಹಲ್ಗಾಮ್ನ ಜವಾಹರ್ ಪರ್ವತಾರೋಹಣ ಮತ್ತು ಚಳಿಗಾಲದ ಕ್ರೀಡೆಗಳ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿವೆ.
ಆರು ಸದಸ್ಯರ ತಂಡದಲ್ಲಿ ಕರ್ನಲ್ ಹೇಮ್ ಚಂದ್ರ ಸಿಂಗ್, ಕ್ಯಾಪ್ಟನ್ ಜಿ. ಸಂತೋಷ್ ಕುಮಾರ್, ದೀಪ್ ಬಹದ್ದೂರ್ ಸಾಹಿ, ವಿನೋದ್ ಗುಸೇನ್, ನೈಬ್ ಸಿಪಾಯಿ ಭೂಪಿಂದರ್ ಸಿಂಗ್ ಹಾಗೂ ಹವಿಲ್ದಾರ್ ರಮೇಶ್ ಕುಮಾರ್ ಸೇರಿದ್ದಾರೆ.
ತಂಡಕ್ಕೆ ಶುಭ ಹಾರೈಸಿದ ರಕ್ಷಣಾ ಸಚಿವರು, “ಇಂತಹ ದುರ್ಗಮ ಶಿಖರದ ಆರೋಹಣ ಕೇವಲ ದೈಹಿಕ ಸಹನಶಕ್ತಿಯ ಪರೀಕ್ಷೆಯಲ್ಲ ಅದು ನಾಯಕತ್ವ, ತಂಡದ ಕೆಲಸ ಮತ್ತು ಮಾನಸಿಕ ದೃಢತೆಯ ನಿಜವಾದ ಪರೀಕ್ಷೆಯಾಗಿದೆ” ಎಂದು ಹೇಳಿದರು. ತಂಡವು ಯಶಸ್ವಿಯಾಗಿ ಶಿಖರಾರೋಹಣ ಮಾಡಿ ದೇಶಕ್ಕೆ ಹೆಮ್ಮೆ ತರುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಮೌಂಟ್ ಅಕಾನ್ಕಾಗುವಾದ ಯಾತ್ರೆಯಿಂದ ಲಭಿಸುವ ಅನುಭವ ಮತ್ತು ಆತ್ಮವಿಶ್ವಾಸವು ದೇಶದ ಯುವಕರು, ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ಸಾಹಸ ಕ್ರೀಡಾಪಟುಗಳಿಗೆ ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ತರಬೇತಿಗೆ ನೆರವಾಗಲಿದೆ ಎಂದು ಸಚಿವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa