ಭಾರತ–ಶ್ರೀಲಂಕಾ ಆಧ್ಯಾತ್ಮಿಕ ಬಾಂಧವ್ಯಕ್ಕೆ ಮತ್ತೊಂದು ಮೈಲಿಗಲ್ಲು
ನವದೆಹಲಿ, 05 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಶ್ರೀಲಂಕಾ ನಡುವಿನ ಶತಮಾನಗಳಷ್ಟು ಹಳೆಯ ನಾಗರಿಕ ಹಾಗೂ ಆಧ್ಯಾತ್ಮಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಭಗವಾನ್ ಬುದ್ಧನ ಪವಿತ್ರ ‘ದೇವನಿಮೋರಿ ಅವಶೇಷ’ಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಪ್ರದರ್ಶನಕ್ಕಾಗಿ ಕೊಂಡೊ
Budha


ನವದೆಹಲಿ, 05 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಶ್ರೀಲಂಕಾ ನಡುವಿನ ಶತಮಾನಗಳಷ್ಟು ಹಳೆಯ ನಾಗರಿಕ ಹಾಗೂ ಆಧ್ಯಾತ್ಮಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಭಗವಾನ್ ಬುದ್ಧನ ಪವಿತ್ರ ‘ದೇವನಿಮೋರಿ ಅವಶೇಷ’ಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಪ್ರದರ್ಶನಕ್ಕಾಗಿ ಕೊಂಡೊಯ್ಯಲಾಗಿದ್ದು, ಗಂಗಾರಾಮಯ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗಿದೆ.

ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಈ ಪವಿತ್ರ ಅವಶೇಷಗಳನ್ನು ಕೊಲಂಬೊಗೆ ಸಾಗಿಸಲಾಗಿದ್ದು, ಅಲ್ಲಿಗೆ ತಲುಪಿದ ವೇಳೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಸ್ವಾಗತಿಸಲಾಯಿತು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಗೂ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ನೇತೃತ್ವದ ಭಾರತೀಯ ನಿಯೋಗವು ಬುಧವಾರ ಅವಶೇಷಗಳೊಂದಿಗೆ ಶ್ರೀಲಂಕಾಕ್ಕೆ ಆಗಮಿಸಿತು.

ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಬುಧವಾರ ಕೊಲಂಬೊದಲ್ಲಿರುವ ಪವಿತ್ರ ಗಂಗಾರಾಮಯ ದೇವಸ್ಥಾನದಲ್ಲಿ ಪ್ರದರ್ಶನವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗಂಗಾರಾಮಯ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಕಿರಿಂಡೆ ಅಸ್ಸಾಜಿ ಥೀರೋ ಸೇರಿದಂತೆ ಹಿರಿಯ ಬೌದ್ಧ ಭಿಕ್ಷುಗಳು, ಧಾರ್ಮಿಕ ನಾಯಕರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಅಂಗವಾಗಿ ಗಂಗಾರಾಮಯ ದೇವಸ್ಥಾನದಲ್ಲಿ ‘ಪವಿತ್ರ ಪಿಪ್ರಾಹ್ವಾ ಅನಾವರಣ’ ಹಾಗೂ ‘ಸಮಕಾಲೀನ ಭಾರತದಲ್ಲಿ ಪವಿತ್ರ ಅವಶೇಷಗಳು ಮತ್ತು ಸಾಂಸ್ಕೃತಿಕ ಸಂಪರ್ಕಗಳು’ ಎಂಬ ಎರಡು ವಿಶೇಷ ಪ್ರದರ್ಶನಗಳನ್ನು ಉದ್ಘಾಟಿಸಲಾಯಿತು. ಗಮನಾರ್ಹವಾಗಿ, ಇದು ಭಾರತದ ಹೊರಗೆ ದೇವನಿಮೋರಿ ಅವಶೇಷಗಳ ಮೊದಲ ಸಾರ್ವಜನಿಕ ಪ್ರದರ್ಶನವಾಗಿದೆ.

ಈ ಹಿಂದೆ ಭಾರತವು 2012ರಲ್ಲಿ ಶ್ರೀಲಂಕಾದಲ್ಲಿ ಕಪಿಲವಾಸ್ತು ಅವಶೇಷಗಳ ಪ್ರದರ್ಶನವನ್ನು ಮತ್ತು 2018ರಲ್ಲಿ ಸಾರನಾಥ ಅವಶೇಷಗಳ ಪ್ರದರ್ಶನವನ್ನು ಆಯೋಜಿಸಿತ್ತು. ಇತ್ತೀಚಿನ ಈ ಪ್ರದರ್ಶನವು 2026ರ ಫೆಬ್ರವರಿ 5ರಿಂದ ಜಗತ್ತಿನಾದ್ಯಂತದ ಭಕ್ತರು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಶ್ರೀಲಂಕಾದ 78ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಈ ಪ್ರದರ್ಶನ ಹೊಂದಿಕೊಂಡಿರುವುದು ಇದಕ್ಕೆ ಮತ್ತಷ್ಟು ಮಹತ್ವ ನೀಡಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ಅಚಲ ನಂಬಿಕೆ ಹಾಗೂ ಸ್ನೇಹದ ಸಂಕೇತವಾಗಿದೆ. ಈ ಪ್ರದರ್ಶನವು 2025ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಘೋಷಣೆಯ ಫಲಿತಾಂಶವಾಗಿದ್ದು, ಬೌದ್ಧ ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಘೋಷಿಸಿದ್ದ 1.5 ಲಕ್ಷ ಅಮೆರಿಕನ್ ಡಾಲರ್ ಅನುದಾನದ ಭಾಗವಾಗಿದೆ. ಇದಲ್ಲದೆ, ಅನುರಾಧಪುರದಲ್ಲಿನ ‘ಪವಿತ್ರ ನಗರ ಸಂಕೀರ್ಣ’ದ ಅಭಿವೃದ್ಧಿಗೆ ಹೆಚ್ಚುವರಿ ಬೆಂಬಲ ನೀಡುವುದಾಗಿ ಪ್ರಧಾನಿಯವರು ಬದ್ಧತೆ ವ್ಯಕ್ತಪಡಿಸಿದ್ದರು.

ಭಗವಾನ್ ಬುದ್ಧನ ಕರುಣೆ, ಶಾಂತಿ ಮತ್ತು ಅಹಿಂಸೆಯ ಶಾಶ್ವತ ಸಂದೇಶಗಳಿಗೆ ಜೀವಂತ ಸಾಕ್ಷಿಯಾಗಿ ದೇವನಿಮೋರಿ ಅವಶೇಷಗಳ ಪ್ರದರ್ಶನ ನಿಲ್ಲುತ್ತಿದ್ದು, ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಆಳವಾದ ನಾಗರಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande