
ನವದೆಹಲಿ, 15 ಜನವರಿ (ಹಿ.ಸ.) :
ಆ್ಯಂಕರ್ : ಭಾರತದಲ್ಲಿ ಪ್ರಜಾಪ್ರಭುತ್ವದ ನಿಜವಾದ ಅರ್ಥ ಕೊನೆಯ ವ್ಯಕ್ತಿಗೂ ಸರ್ಕಾರದ ಪ್ರಯೋಜನಗಳು ತಲುಪುವುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂಸತ್ ಭವನದ ಸಂವಿಧಾನ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾಮನ್ವೆಲ್ತ್ ಸ್ಪೀಕರ್ಗಳು ಮತ್ತು ಸಭಾಧ್ಯಕ್ಷರ 28ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಕಲ್ಯಾಣ ಯೋಜನೆಗಳು ಕಳೆದ ಕೆಲವು ವರ್ಷಗಳಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿವೆ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವ ಪ್ರಯಾಣದಲ್ಲಿ ಸೆಂಟ್ರಲ್ ಹಾಲ್ ಮಹತ್ವದ ಮೈಲಿಗಲ್ಲು ಎಂದು ವಿವರಿಸಿದ ಪ್ರಧಾನಿ, ಈ ಸ್ಥಳವು ಸಂವಿಧಾನ ಸಭೆಯ ಸಭೆಗಳಿಂದ ಆರಂಭಿಸಿ 75 ವರ್ಷಗಳ ಸಂಸತ್ ಚಟುವಟಿಕೆಗಳಿಗೆ ಸಾಕ್ಷಿಯಾಗಿತ್ತು ಎಂದು ನೆನಪಿಸಿದರು. ಈಗ ಇದನ್ನು ‘ಸಂವಿಧಾನ ಭವನ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್ರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರು ಮಾತನಾಡುವುದಕ್ಕಿಂತ ಕೇಳುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುತ್ತಾರೆ ಎಂದು ಪ್ರಧಾನಿ ಹೇಳಿದರು. ಭಾರತದ ವೈವಿಧ್ಯತೆಯೇ ಪ್ರಜಾಪ್ರಭುತ್ವದ ಶಕ್ತಿಯಾಗಿದ್ದು, ಇಂದು ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವುದು ಇದಕ್ಕೆ ಸಾಕ್ಷಿ ಎಂದರು.
ಡಿಜಿಟಲ್ ಪಾವತಿ, ಲಸಿಕೆ ಉತ್ಪಾದನೆ, ಉಕ್ಕು, ನವೋದ್ಯಮ, ವಾಯುಯಾನ, ರೈಲು ಮತ್ತು ಮೆಟ್ರೋ ಜಾಲಗಳಲ್ಲಿನ ಭಾರತದ ಸಾಧನೆಗಳನ್ನು ವಿವರಿಸಿದ ಮೋದಿ, ಕೋವಿಡ್ ಸಂಕಷ್ಟದ ಸಮಯದಲ್ಲೂ ಭಾರತವು ಜಗತ್ತಿಗೆ ಔಷಧಿ ಮತ್ತು ಲಸಿಕೆಗಳನ್ನು ಒದಗಿಸಿದೆ ಎಂದು ಹೇಳಿದರು. ಜಿ-20 ಅಧ್ಯಕ್ಷತೆಯ ಮೂಲಕ ಜಾಗತಿಕ ದಕ್ಷಿಣದ ಧ್ವನಿಯನ್ನು ಭಾರತ ಬಲವಾಗಿ ಪ್ರತಿಪಾದಿಸಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa