ರಾಯಚೂರು, 08 ಜುಲೈ (ಹಿ.ಸ.) :
ಆ್ಯಂಕರ್ : ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ದಕ್ಷ ಆಡಳಿತ ನೀಡುತ್ತಿರುವುದಕ್ಕೆ ರಾಯಚೂರ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರಿಗೆ ರಾಜ್ಯ ಸರ್ಕಾರವು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದೆ.
ರಾಯಚೂರ ಜಿಲ್ಲೆಯಲ್ಲಿ ರಾಷ್ಟಿಯ ಸಾಮಾಜಿಕ ನೆರವು ಯೋಜನೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿರುವ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳು ಮೇ ಮಾಹೆಯಲ್ಲಿ ನಡೆಸಿದ ಸಭೆಯಲ್ಲಿ ಗಮನಿಸಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಮಾಜಿಕ ನೆರವು ಯೋಜನೆಯ ಪ್ರಗತಿ ಸಾಧನೆಗಾಗಿ ಪ್ರಶಂಸನಾ ಪತ್ರವನ್ನು ಹೊರಡಿಸಲು ಸಹ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು.
ರಾಯಚೂರ ಜಿಲ್ಲೆಯಲ್ಲಿ ಸಾಮಾಜಿಕ ನೆರವು ಯೋಜನೆಯು ಪ್ರಗತಿ ಸಾಧಿಸಲು ಇಲಾಖಾಧಿಕಾರಿಗಳು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ಅಚಲವಾದ ಬದ್ಧತೆ, ನಿರಂತರ ಶ್ರಮ ಹಾಗೂ ಸಮನ್ವಯದ ಕಾರ್ಯಪದ್ಧತಿಗೆ ಶ್ಲಾಘನೆ ಸಲ್ಲಲೇಬೇಕು. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ತಂಡದ ಈ ಉತ್ಸಾಹ ಹಾಗೂ ಕಠಿಣ ಪರಿಶ್ರಮವೇ ಇಂತಹ ಯಶಸ್ಸಿಗೆ ನಾಂದಿಯಾಗಿದೆ.
ರಾಯಚೂರ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿಯೂ ಇಂತಹುದೇ ಉತ್ಸಾಹದಿಂದ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸುತ್ತೇವೆ. ಪ್ರಗತಿಪಥದಲ್ಲಿ ರಾಯಚೂರ ಜಿಲ್ಲೆ ಸಾಧನೆ ಇತರೆ ಜಿಲ್ಲೆಗಳಿಗೆ ಪ್ರೇರಣೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು, ಈ ವಿಶೇಷ ಸಾಧನೆಗಾಗಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರಿಗೆ ಹಾಗೂ ರಾಯಚೂರ ಜಿಲ್ಲೆಯ ಎಲ್ಲ ಅಧಿಕಾರಿ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್