ಬಳ್ಳಾರಿ/ಹಿರಿಯೂರು, 23 ಜುಲೈ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಹೆದ್ದಾರಿ ಹಿರಿಯೂರಿನ ಬಳಿ ಲಾರಿಯನ್ನು ಕಾರು ಓವರ್ಟೇಕ್ ಮಾಡುವಾಗ ಬುಧವಾರ ಬೆಳಗ್ಗೆ ಉಂಟಾದ ರಸ್ತೆ ಅಪಘಾತದಲ್ಲಿ ಬಳ್ಳಾರಿಯ ಬಸವೇಶ್ವರ ನಗರ ನಿವಾಸಿ ಕೋರಿ ಸುರೇಶ್ (46) ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನ ಚಾಲಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೋರಿ ಸುರೇಶ್ ಅವರು ಬಳ್ಳಾರಿಯ ಲಿಕ್ಕರ್ ಉದ್ಯಮಿ ಸಾಹುಕಾರ್ ಸತೀಶ್ ಬಾಬು ಅವರ ಬಳಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಬಳ್ಳಾರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ನಡೆದಾಗ ಸುರೇಶ್ ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದೆ. ಕಾರಿನ ಚಾಲಕನು ಪ್ರಯಾಸಪಟ್ಟು ಕಾರಿನಿಂದ ಹೊರಗಡೆ ಬಂದು ಸಾರ್ವಜನಿಕರ ಸಹಾಯದಿಂದ ಪೊಲೀಸರು ಮತ್ತು ಸುರೇಶ್ ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ಗಾಯಗೊಂಡಿರುವ ಕಾರಿನ ಚಾಲಕನು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಅಪಘಾತದ ಸುದ್ದಿ ವೈರಲ್ ಆಗುತ್ತಿದ್ದಂತೆಯೇ, ಕೋರಿ ಸುರೇಶ್ ಅವರ ಆಪ್ತರು, ಬಂಧು ವರ್ಗ, ಮಿತ್ರರು ಮತ್ತು ಸಾರ್ವಜನಿಕರು ಬಸವೇಶ್ವರ ನಗರದಲ್ಲಿರುವ ಅವರ ಮನೆಗೆ ಬಂದು ಸಾಂತ್ವನ ಹೇಳತೊಡಗಿದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್