ದಾವಣಗೆರೆ, 27 ಜೂನ್ (ಹಿ.ಸ.):
ಆ್ಯಂಕರ್:ಧಾರವಾಡದಿಂದ ಬೆಂಗಳೂರು ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಕ್ರದಲ್ಲಿ ದಾವಣಗೆರೆಯ ಸಮೀಪ ಬೆಂಕಿ ಕಾಣಿಸಿಕೊಂಡು ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ರೈಲ್ವೆ ಸಿಬ್ಬಂದಿ ಹಾಗೂ ಗೇಟ್ಮ್ಯಾನ್ ಸಮಯ ಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದೆ.
ಪ್ರಾಥಮಿಕ ಮಾಹಿತಿಯಂತೆ, ದಾವಣಗೆರೆಯ ಬಳಿ ರೈಲು ಚಕ್ರದಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದನ್ನು ಗೇಟ್ ಮ್ಯಾನ್ ಗಮನಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ರೈಲನ್ನು ದಾವಣಗೆರೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ
ಶತಾಬ್ದಿ ಎಕ್ಸ್ಪ್ರೆಸ್ ಮೂಲಕ ಬೆಂಗಳೂರಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಯಿತು. ಸಿಬ್ಬಂದಿಯ ಎಚ್ಚರಿಕೆಯ ಕಾರ್ಯಾಚರಣೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ರೈಲ್ವೆ ಇಲಾಖೆ ಮೂಲಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ತಾಂತ್ರಿಕ ದೋಷದಿಂದ ಚಕ್ರದಲ್ಲಿ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ಇನ್ನಷ್ಟು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa