ಹೊಸಪೇಟೆ, 27 ಜೂನ್ (ಹಿ.ಸ.)
ಆ್ಯಂಕರ್: ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಬಳಿಕ ಮಾರಾಟ ಮಳಿಗೆಗಳಲ್ಲಿನ ಸಿಹಿ ತಿನಿಸುಗಳು, ಕುಡಿಯುವ ನೀರಿನ ಬಾಟಲ್, ಪ್ಯಾಕಿಂಗ್ ತಿನಿಸುಗಳ ಕವರ್ ಮೇಲಿನ ವ್ಯಾಲಿಡಿಟಿ ಪರಿಶೀಲಿಸಿ ಮಾರಾಟಗಾರರಿಗೆ ಕೆಲವು ಸಲಹೆಗಳನ್ನು ನೀಡಿದರು. ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ ಡಿಟಿಓ ರಾಜಶೇಖರ್ ವಾಜಂತ್ರಿರಿಗೆ ಒಂದು ಗ್ಲಾಸ್ ನೀರು ಕುಡಿಸಿದರು. ಘಟಕದಲ್ಲಿ ಮುದ್ರಿಸಿದ್ದ 1 ಲೀಟರ್ ನೀರಿಗೆ ರೂ.2 ನಾಮಫಲಕವನ್ನು ತೆರವುಗೊಳಿಸಿ, ಉಚಿತ ಕುಡಿಯುವ ನೀರು ನೀಡುವಂತೆ ಸೂಚಿಸಿದರು.
ಬಸ್ ನಿಲ್ದಾಣದಲ್ಲಿನ ಶೌಚಾಲಯದಲ್ಲಿ ಮಹಿಳೆಯರಿಂದ ರೂ.10 ಸಂಗ್ರಹಿಸುತ್ತಿದ್ದಾರೆಂದು ಸ್ಥಳೀಯ ಆಟೋ ಚಾಲಕರು ಡಿಸಿಯವರಿಗೆ ದೂರಿದರು. ಸ್ವತಃ ಜಿಲ್ಲಾಧಿಕಾರಿಗಳು ಶೌಚಾಲಯ ಸ್ವಚ್ಛತೆಯನ್ನು ಪರಿಶೀಲಿಸಿ ಹೊರ ಬರುತ್ತಿದ್ದ ಮಹಿಳೆಯರಿಗೆ ಹಣ ಎಷ್ಟು ಕೊಟ್ಟಿರಿ ಎಂದು ಕೇಳಿದರು.
ಮಹಿಳೆರು ತಲಾ 10 ರೂ ಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಕ್ಕೆ ಗರಂ ಆದ ಜಿಲ್ಲಾಧಿಕಾರಿಗಳು ಕೂಡಲೇ ಡಿಟಿಓರಿಗೆ ಶಿಸ್ತು ಕ್ರಮ ವಹಿಸುವಂತೆ ಸೂಚಿಸಿದರು. ಬಸ್ ನಿಲ್ದಾಣದಲ್ಲಿನ ಮೂರು ಶೌಚಾಲಯಗಳನ್ನು ಹಾಗೂ ನಿಲ್ದಾಣದ ಆವರಣ ಸೇರಿದಂತೆ ಕ್ಯಾಂಟಿನ್ ಒಳಗಡೆ ಅಡುಗೆ ಮನೆ, ವಿತರಣೆ ಹಾಗೂ ಅಡುಗೆಗೆ ಬಳಸುವ ಎಣ್ಣೆಯ ಗುಣಮಟ್ಟ, ಸ್ವಚ್ಛತೆಯನ್ನು ಪರಿಶೀಲಿಸಿದರು.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಐ ಲಖನ್ ಮಸಗುಪ್ಪಿ ಅವರು ಬಸ್ ನಿಲ್ದಾಣದಲ್ಲಿ ಕಳ್ಳತನ ಜಾಗೃತಿ ನಡೆಸುವ ಕುರಿತು ಮೈಕ್ ವ್ಯವಸ್ಥೆ ಮಾಡಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಪ್ರಥಮ ಆದ್ಯತೆ ನೀಡಿ ಕೂಡಲೇ ಅವರಿಗೆ ಮೈಕ್ ವ್ಯವಸ್ಥೆ ಕಲ್ಪಿಸುವಂತೆ ಡಿಟಿಓ ರಾಜಶೇಖರ್ ವಾಜಂತ್ರಿರಿಗೆ ಸೂಚನೆ ನೀಡಿದರು.
ಈ ವೇಳೆ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ವಾರ್ತಾಧಿಕಾರಿ ಧನಂಜಯಪ್ಪ.ಬಿ ಸೇರಿ ಕೆಕೆಎಸ್ಆರ್ಟಿಸಿ ಸಿಬ್ಬಂದಿಗಳು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್