ಕೋಲಾರ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರಾಚೀನ ಪರಂಪರೆಯ ಯೋಗ ಅನಾವರಣ
ಕೋಲಾರ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರಾಚೀನ ಪರಂಪರೆಯ ಯೋಗ ಅನಾವರಣ
ಕೋಲಾರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಯೋಗ ಪ್ರದರ್ಶನ ನಡೆಯಿತು. ಸಂಸದ ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಚಿತ್ರದಲ್ಲಿದ್ದಾರೆ.


ಕೋಲಾರ, ಜೂನ್ ೨೧ (ಹಿ.ಸ) :

ಆ್ಯಂಕರ್ : ಪ್ರಾಚೀನ ಪರಂಪರೆಯ ಯೋಗ ದಿನಾಚರಣೆಗೆ ಕೋಲಾರ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಸಾಕ್ಷಿಯಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಯೋಗ ಸಂಸ್ಥೆಯ ಯೋಗಪಟುಗಳು ಯೋಗ ಪ್ರದರ್ಶನ ನಡೆಸಿ ಯೋಗ ಎಂಬುದು ಕೇವಲ ಒಂದು ಶಾರೀರಿಕ ವ್ಯಾಯಾಮ ಅಲ್ಲ. ಅದೊಂದು ಜೀವನದ ಕ್ರಮ ಆಗಿದೆ. ಮನಸ್ಸು ದೇಹ ಆತ್ಮವನ್ನು ಒಂದುಗೂಡಿಸುವ ಪ್ರಾಚೀನ ಪರಂಪರೆಯಾಗಿದೆ ಎಂಬುದನ್ನು ಸಾರಿದರು.

ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ೧೧ ನೇ ಅಂತಾರಾಷ್ಟಿಯ ಯೋಗ ದಿನಾಚರಣೆಯನ್ನು ಸಂಸದ ಮಲ್ಲೇಶ್‌ಬಾಬು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಕಳೆದ ವರ್ಷ ಯೋಗ ದಿನಾಚರಣೆಯಲ್ಲಿ ಯೋಗಾಭ್ಯಾಸ ಮಾಡಿದೆ ಆ ನಂತರ ನಾನು ಮಾಡಲು ಸಮಯವೇ ಸಿಗಲಿಲ್ಲ. ಈ ದಿನ ನಾನು ಮತ್ತೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಯೋಗ ಅಭ್ಯಾಸ ಮಾಡುತ್ತೇನೆ. ಜನರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬಳಕೆ ಸ್ವಲ್ಪ ಸಮಯ ಬದಿಗಿಟ್ಟು ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಯೋಗ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನ ಯೋಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಯೋಗ ಅಭ್ಯಾಸದಿಂದ ಶರೀರ ಮತ್ತು ಮನಸ್ಸು ನಿರಾಳವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸದೃಢರಾಗಲು ಯೋಗ ಅತ್ಯಂತ ಮಹತ್ವವಾಗಿದೆ. ಜಾಗತಿಕ ಮಟ್ಟದಲ್ಲಿ ಯೋಗ ಮನ್ನಣೆ ಪಡೆದಿದೆ. ಜಗತ್ತಿನಲ್ಲಿ ಶಾಂತಿ ಸಂದೇಶ ಸಾರಲು ಮನುಷ್ಯರು ಪರಸ್ಪರ ಪ್ರೀತಿಸಲು ಮತ್ತು ಇತರರನ್ನು ಗೌರವಿಸಿ ಸಾಮರಸ್ಯದಿಂದ ಬದುಕಲು ಯೋಗ ಒಂದು ಹಾದಿಯಾಗಿದೆ.

ಬೆಲ್ಲ ಸವಿದವನಿಗೆ ಅದರ ಗಮ್ಮತ್ತು ಅವನಿಗೆ ಗೊತ್ತು. ಅದೇ ರೀತಿ ಯೋಗ ಅಭ್ಯಾಸ ಮಾಡಿದವನಿಗೆ ಯೋಗದ ಪರಿಣಾಮ ಗೊತ್ತು. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಯೋಗ ಒಂದು ದಾರಿಯಾಗಿದೆ. ಗೌತಮ ಬುದ್ಧ ಹೇಳಿದ ಹಾಗೆ ಸಾವಿಲ್ಲದ ಮನೆಯಿಂದ ಸಾಸುವೆ ಕಾಳು ತರಲು ಸಾಧ್ಯವಿಲ್ಲ.

ಅದೇ ರಈತಿ ಸಮಾಜದಲ್ಲಿ ಒತ್ತಡವಿಲ್ಲದ ಮನೆ, ವ್ಯಕ್ತಿ ನೋಡಲು ಸಾಧ್ಯವಿಲ್ಲ. ಒತ್ತಡವನ್ನು ನಿವಾರಿಸುವುದು ದೊಡ್ಡ ಸವಾಲಾಗಿದೆ. ಈ ಒತ್ತಡವನ್ನು ನಿಭಾಯಿಸಲು, ಶಾಶ್ವತ ಪರಿಹಾರ ಯೋಗ. ಯೋಗವನ್ನು ಅಂತರ್ಗತ ಮಾಡಿಕೊಳ್ಳುವುದಷ್ಠೇ ಅಲ್ಲ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಪರಿಣಾಮಕಾರಿ ಸಾಧನವಾಗಿದೆ. ಯಾವ ಮನೆಯಲ್ಲಿ ಆರೋಗ್ಯ, ನೆಮ್ಮದಿ ಇರುತ್ತದೆಯೋ ಆ ಮನೆ ಸಂಪದ್ಭರಿತವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಕೆಜಿ ಎಫ್ ಪೊಲೀಸ್ ಅಧೀಕ್ಷಕರಾದ ಕೆ. ಎಂ. ಶಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಘವೇಂದ್ರ ಶೆಟ್ಟಿಗಾರ್, ಸಮಾಜ ಸೇವಕರಾದ ಸಿ.ಎಂ.ಆರ್. ಶ್ರೀನಾಥ್, ವಿದ್ಯಾರ್ಥಿಗಳು, ಯೋಗ ಬಂಧುಗಳು, ಪತಂಜಲಿ ಯೋಗಶಿಕ್ಷಣ ಸಮಿತಿ, ವಿವೇಕಾನಂದ ಯೋಗ ಚಾರಿಟೇಬಲ್ ಟ್ರಸ್ಟ್ ಪ್ರಜಾಪಿತ ಈಶ್ವರಿಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಬಿ.ಕೆ.ಎಸ್. ಅಯ್ಯಂಗಾರ್ ಯೋಗ ಶಿಕ್ಷಣ ಸಂಸ್ಥೆ ಹಾಗೂ ಇನ್ನಿತರ ಯೋಗ ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

ಚಿತ್ರ : ಕೋಲಾರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಯೋಗ ಪ್ರದರ್ಶನ ನಡೆಯಿತು. ಸಂಸದ ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಚಿತ್ರದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande