ವಿಶ್ವ ಪಾರಂಪರಿಕ ತಾಣದಲ್ಲಿ ಸಚಿವ ಜೋಶಿ ಯೋಗ
ಬಾಗಲಕೋಟೆ, 21 ಜೂನ್ (ಹಿ.ಸ.) : ಆ್ಯಂಕರ್ : ವಿಶ್ವ ವಿಖ್ಯಾತ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್‌ ಇಂದು 11ನೇ ಯೋಗ ದಿನಾಚರಣೆಗೆ ಸಾಕ್ಷಿಯಾಯಿತು. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಯೋಗದಲ್ಲಿ ನಿರತರಾಗಿ ಅರ್ಥಪೂರ್ಣ ಆಚರಣೆಗೆ ಮೆ
Joshi yoga


ಬಾಗಲಕೋಟೆ, 21 ಜೂನ್ (ಹಿ.ಸ.) :

ಆ್ಯಂಕರ್ : ವಿಶ್ವ ವಿಖ್ಯಾತ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್‌ ಇಂದು 11ನೇ ಯೋಗ ದಿನಾಚರಣೆಗೆ ಸಾಕ್ಷಿಯಾಯಿತು. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಯೋಗದಲ್ಲಿ ನಿರತರಾಗಿ ಅರ್ಥಪೂರ್ಣ ಆಚರಣೆಗೆ ಮೆರುಗು ನೀಡಿದರು.

ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಪಟ್ಟದಕಲ್‌ನಲ್ಲಿ ಶನಿವಾರ ಮುಂಜಾನೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಸಚಿವ ಜೋಶಿ ಅವರು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಡನೆ ಯೋಗಭ್ಯಾಸಗೈದು ಪ್ರೇರಣೆಯಾದರು. ನಾನಾ ಆಯಾಮಗಳಲ್ಲಿ ಯೋಗ ಮಾಡಿ ಆಕರ್ಷಿಸಿದರು.

ಇದೇ ವೇಳೆ ಮಾತನಾಡಿದ ಸಚಿವರು, ಯೋಗ ನಮ್ಮ ಪ್ರಾಚೀನ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಉತ್ತಮ ಅಭ್ಯಾಸವಾಗಿದೆ. ಇದು ನಮ್ಮ ದೇಹ, ಮನಸ್ಸು ಮತ್ತು ಆತ್ಮಬಲ ಮಾತ್ರವಲ್ಲದೆ, ಜಗತ್ತಿನಲ್ಲಿ ಸಾಮರಸ್ಯ ಸಾಧಿಸುವ ವಿಶಿಷ್ಟ ಗುರಿ ಸಹ ಹೊಂದಿದೆ ಎಂದು ಪ್ರತಿಪಾದಿಸಿದರು.

ಕ್ರಿಯೆ-ಕೌಶಲ್ಯದಿಂದ ಕೂಡಿರುವಂಥ ಯೋಗ ನಿಜಕ್ಕೂ ನಮ್ಮ ಕರ್ಮಯೋಗದಲ್ಲಿ ಶ್ರೇಷ್ಠತೆಯುಳ್ಳದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ‌ ಅವರು ʼಮನ್ ಕೀ ಬಾತ್ʼನಲ್ಲಿ ಘೋಷಿಸಿದಂತೆ ʼಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯವಾಗಿದೆ ಎಂದರು.

*ಜಾಗತಿಕ ಆರೋಗ್ಯ ಮೋದಿ ಆಶಯ:*

ಭಾರತೀಯ ನೆಲದಲ್ಲಿ ಅರಳಿದ ಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಸಾಧನವಾಗಿದೆ. ಪ್ರಸ್ತುತದ ಪ್ರತಿಕೂಲಕ ಪರಿಸ್ಥಿತಿಯಲ್ಲಿ ಯೋಗ ಅನುಸರಣೆ ವಿಶ್ವಕ್ಕೆ ಅತ್ಯಗತ್ಯವಾಗಿದೆ ಎಂಬುದನ್ನು ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವಾಗಿ ಇಂದು ವಿಶ್ವವೇ ಯೋಗಭ್ಯಾಸದಲ್ಲಿ ನಿರತವಾಗಿದೆ ಎಂದು ಸಚಿವ ಜೋಶಿ ಬಣ್ಣಿಸಿದರು.

21ನೇ ಶತಮಾನ ಭಾರತದ ಶತಮಾನ ಆಗುವಲ್ಲಿ ʼಯೋಗʼ ಅನನ್ಯ ಕೊಡುಗೆ ನೀಡುತ್ತಿದೆ. ಹಾಗಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇಂದು ಯೋಗ ದಿನ ಆಚರಿಸುತ್ತಿದ್ದು, ಭಾರತದ ಯೋಗ ಪದ್ಧತಿಯ ಮಹತ್ವ ಜಗತ್ತಿಗೇ ಅರ್ಥವಾಗಿದೆ ಎಂದು ಹೇಳಿದರು.

ಭಾರತೀಯ ಪುರಾತತ್ವ ಸಮೀಕ್ಷೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್, ಎಂಎಲ್ ಸಿ ಹನುಮಂತ ಆರ್. ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿಪಂ ಸಿಇಒ ಶಶಿಧರ ಕುರೇರ, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಭಾರತೀಯ ಪುರಾತತ್ವ ಸಮೀಕ್ಷೆಯ ಹಿರಿಯ ಅಧಿಕಾರಿ ನವರತ್ನಿ ಕುಮಾರ್ ಪಾಟಕ್ ಹಾಗೂ ಅಧಿಕಾರಿ ವರ್ಗ ಮತ್ತು ಗಣ್ಯರನೇಕರು ಭಾಗಿಯಾಗಿ ಅರ್ಥಪೂರ್ಣ ಯೋಗ ದಿನಾಚರಣೆಗೆ ಸಾಕ್ಷಿಯಾದರು.

*ವಿಶ್ವ ಪರಂಪರೆ ತಾಣಗಳಿಗೆ ಸಚಿವರ ಭೇಟಿ:* ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಯೋಗ ದಿನಾಚರಣೆ ಬಳಿಕ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಚಾಲುಕ್ಯರ ಆಳ್ವಿಕೆಯಲ್ಲಿ ಪಟ್ಟಾಭಿಷೇಕ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಪಟ್ಟದಕಲ್ಲಿನಲ್ಲಿ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರ ಶೈಲಿಯ ವಾಸ್ತುಶಿಲ್ಪ ಅತ್ಯದ್ಭುತವಾಗಿದೆ. ಶಿಲ್ಪಕಲೆಯ ವಿಶಿಷ್ಟತೆಯಿಂದಾಗಿ ವಿಶ್ವ ಪರಂಪರೆಯು ತಾಣವಾಗಿರುವ ಪಟ್ಟದಕಲ್ ಅತ್ಯಂತ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande