ರಾಯಚೂರು, 19 ಜೂನ್ (ಹಿ.ಸ.) :
ಆ್ಯಂಕರ್ : 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 18ರಂದು ಯೋಗ ಸ್ಪರ್ಧೆ ನಡೆಯಿತು.
ಆಯುಷ್ ಇಲಾಖೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ. ಶಂಕರಗೌಡ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಅದರ ಮಹತ್ವ ಅದನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡಲ್ಲಿ ಆಗುವ ಲಾಭಗಳು, ಜೊತೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ವರ್ಷದ ಘೋಷವಾಕ್ಯ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಆಗಿದ್ದು ವಿದ್ಯಾರ್ಥಿಗಳು ಯೋಗ ಅಭ್ಯಾಸವನ್ನು ಕಲಿಯಿರಿ ಆರೊಗ್ಯವನ್ನು ವೃದ್ದಿಸಿಕೊಳ್ಳಿರಿ ಎಂದು ತಿಳಿಸಿದರು.
ಮುಖ್ಯ ಅತಿಥಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ್ ಮಾತನಾಡಿ, ವಿಶ್ವದಲ್ಲಿ ಸಾರ್ವತ್ರಿಕವಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಣೆ ಮಾಡಲಾಗುತ್ತದೆ. ಅನಾದಿ ಕಾಲದಿಂದಲೂ ಯೋಗ ಸಾಧನೆಗೆ ಅತಿ ಮಹತ್ವವಿದೆ. ದೀರ್ಘ ಕಾಲದವರೆಗೆ ಆರೋಗ್ಯವಂತರಾಗಿ ಬಾಳಲು ಯೋಗ ಸಹಕಾರಿಯಾಗಿದೆ. ಇದೀಗ ಜಗತ್ತಿನ ನೂರಾರು ರಾಷ್ಟ್ರಗಳಲ್ಲಿ ಈ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಇಂದು ಆರೋಗ್ಯವಿತವಾದ ಅಭ್ಯಾಸವನ್ನು ರೂಡಿ ಮಾಡಿಕೊಂಡು ತಮ್ಮ ಆರೋಗ್ಯವನ್ನು ಸದೃಢಪಡಿಸಿಕೊಳ್ಳಿರಿ ಎಂದು ಹೇಳಿದರು.
ಯೋಗ ತರಬೇತಿದಾರ ಡಾ.ತಿಮಪ್ಪ ವಡ್ಡೆಪಳ್ಳಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಹಾಕಿಕೊಂಡ ಕಾರ್ಯಕ್ರಮಗಳ ಮಾಹಿತಿ ಮತ್ತು ಈ ಸ್ಪರ್ಧೆಗೆ ಇರುವಂತ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆ ಮೇಲೆ ಡಾ.ಪೂಜಾ, ಡಾ.ನವೀನ್, ಡಾ.ಅರ್ಪಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆಯುಷ್ ಇಲಾಖೆಯ ಶ್ರೀಮತಿ ಸಂಗಮ್ಮ ಪ್ರ್ರಾರ್ಥಿಸಿದರು. ಹನುಮಂತ ಸ್ವಾಗತಿಸಿ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್