ಸರ್ಕಾರಿ ಜಮೀನಿಗೆ ನಕಲಿ ದಾಖಲೆ ; ಕಂದಾಯ ಇಲಾಖೆಯ ಕಡ್ಡಾಯ ನಿವೃತ್ತಿ
ಸರ್ಕಾರಿ ಜಮೀನಿಗೆ ನಕಲಿ ದಾಖಲೆ ; ಕಂದಾಯ ಇಲಾಖೆಯ ಕಡ್ಡಾಯ ನಿವೃತ್ತಿ
ಕಡ್ಡಾಯ ನಿವೃತ್ತಿಯಾಗಿರುವ ಶ್ರೀನಿವಾಸಪುರ ಕಂದಾಯ ಇಲಾಖೆಯ ಶಿರಸ್ತೇದಾರ್ ಕೆ.ಗೌತಮ್


ಕೋಲಾರ, ೧೭ ಜೂನ್ (ಹಿ.ಸ) :

ಆ್ಯಂಕರ್ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಜಮೀನೊಂದಕ್ಕೆ ನಕಲಿ ಮಂಜೂರಾತಿ ದಾಖಲೆಗಳಂತೆ ಖಾತೆ ಬದಲಾವಣೆ ಮಾಡಿದ್ದ ಆರೋಪದಡಿ ಹಾಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಚೇರಿಯಲ್ಲಿ ಹಕ್ಕು ದಾಖಲೆ ಶಿರಸ್ತೇದಾರ್ ಆಗಿರುವ ಕೆ.ಗೌತಮ್ ಅವರನ್ನು ಕಡ್ಡಾಯ ನಿವೃತ್ತಿ ದಂಡನೆಗೊಳಪಡಿಸಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆ.ಗೌತಮ್ ಅವರು ಬೆಂಗಳೂರು ಗ್ರಾಮಾಂತರಜಿಲ್ಲೆಯ ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಿರುಮಲಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂ.೫ರ ಸರ್ಕಾರಿ ಜಮೀನಿಗೆ ನಕಲಿ ಮಂಜೂರಾತಿ ದಾಖಲೆಗಳನ್ನು ಸೃಷ್ಠಿ ಮಾಡಿ ಸರ್ಕಾರಿ ಜಮೀನು ಪರಬಾರೆಗೆ ಮಾಡಲು ಸಹಕರಿಸಿದ್ದರು.

ಈ ಅವ್ಯವಹಾರದ ಕುರಿತು ಹೊಸಕೋಟೆ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸರ್ಕಾರಕ್ಕೆ ಸಲ್ಲಿಸಿದ ದೂರಿನ ಅನ್ವಯ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ತನಿಖಾ ತಂಡ ರಚಿಸಿ ವರದಿ ಪಡೆಯಲಾಗಿತ್ತು.

ಇದರಂತೆ ತನಿಖೆಯಲ್ಲಿ ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ಮಂಜೂರಾತಿ ಆದೇಶದಂತ ಎ ೧೭ ಮಂದಿಗೆ ಜಮೀನು ಮಂಜುರಾಗಿರುವುದಾಗಿಯೂ ೩ ಅನಧಿಕೃತ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಿ ಸಾಗುವಳಿ ಚೀಟಿ ಹಾಗೂ ಪಹಣಿಯಲ್ಲಿ ಹೆಸರನ್ನು ಅನಧಿಕೃತವಾಗಿ ಸೇರ್ಪಡೆ ಮಾಡಿರುವುದು, ಮೂಲ ದರಖಾಸ್ತು ಅರ್ಜಿಯಲ್ಲಿ ಅರ್ಜಿದಾರರ ಹೆಸರುಗಳನ್ನು ಅಳಿಸಿಬೇರೆ ಹೆಸರನ್ನು ತಿದ್ದಿ ಸೇರಿಸಿರುವುದು ಕಂಡು ಬಂದಿತ್ತು.

ಆರೋಪಿ ಕೆ.ಗೌತಮ್ ಅವರು, ವಿಚಾರಣಾ ಆದೇಶದ ವರದಿ ವಿರುದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ ಪ್ರಕರಣ ದಾಖಲಿಸಿದ್ದು, ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ಪಡೆದುಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ಮುಗಿದ ನಂತರ ರಿಟ್ ಅರ್ಜಿ ವಜಾಗೊಂಡಿತ್ತು.

ಇದಾದ ನಂತರ ಕೆ.ಗೌತಮ್ ಅವರು ವಿಚರಣಾ ವರದಿ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದು. ಅಲ್ಲಿಯೂ ರಿಟ್ ಅರ್ಜಿ ನೀಡಿದ ತೀರ್ಪಿನಂತೆ ಶಿಸ್ತು ಪ್ರಾಧಿಕಾರ ಅಹವಾಲು ಪರಿಗಣಿಸಲು ನಿರ್ದೇಶನ ನೀಡಿರುವುದರಿಂದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಕೆ.ಗೌತಮ್ ಅವರಿಗೆ ಕಡ್ಡಾಯ ನಿವೃತ್ತಿಯ ದಂಡನೆ ವಿಧಿಸಿ ಆದೇಶಿಸಿದ್ದಾರೆ.

ಚಿತ್ರ : ಕಡ್ಡಾಯ ನಿವೃತ್ತಿಯಾಗಿರುವ ಶ್ರೀನಿವಾಸಪುರ ಕಂದಾಯ ಇಲಾಖೆಯ ಶಿರಸ್ತೇದಾರ್ ಕೆ.ಗೌತಮ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande