ಕೊಪ್ಪಳ, 01 ಜೂನ್ (ಹಿ.ಸ.) :
ಆ್ಯಂಕರ್ : ಸರಕಾರಿ ಸೇವೆಯಲ್ಲಿ ವಯಸ್ಸಿಗೆ ನಿವೃತ್ತಿ ಇರುವುದು ಸಹಜ. ಜಗತ್ತಿನ ಶ್ರೇಷ್ಠ ಕೆಲಸಗಳಲ್ಲಿ ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ವಯಸ್ಸಿನಿಂದ ನಿವೃತ್ತರಾದರೂ ಬೋಧನಾ ಕಾರ್ಯದಿಂದ ನಿವೃತ್ತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಗುರು ಸದಾ ಮಾರ್ಗದರ್ಶಕ ಎಂದು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ವೈ.ಬಿ.ಅಂಗಡಿ ಅವರು ಹೇಳಿದ್ದಾರೆ.
ಕಾಲೇಜಿನ ಸಭಾಂಗಣದಲ್ಲಿ ಸೇವಾ ವಯೋ ನಿವೃತ್ತಿ ಹೊಂದಿದ ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ಎಂ. ಹಾಗೂ ಗಣಿತಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ರಾಧಾರಾಣಿ.ಕೆ. ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿವಪುತ್ರಪ್ಪ ಹಾಗೂ ರಾಧಾರಾಣಿಯವರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು. ಸದಾ ನದುಮೊಗದಿಂದಲೇ ಪಾಠ ಮಾಡುತ್ತಿದ್ದ ಇವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶರಣಬಸಪ್ಪ ಬಿಳಿಯಲಿ, ಡಾ.ನಾಗರಾಜ ದಂಡೋತಿ, ಹಿರಿಯ ಅತಿಥಿ ಉಪನ್ಯಾಸಕ ಡಾ.ವೀರಣ್ಣ ಸಜ್ಜನರ್ ಸೇರಿದಂತೆ ಅನೇಕರು ಮಾತನಾಡಿದರು.
ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಿವೃತ್ತರನ್ನು ಅತಿಥಿ ಉಪನ್ಯಾಸಕರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಡಾಕ್ಟರೆಟ್ ಪದವಿ ಗಳಿಸಿದ ಡಾ.ಶಿವಬಸಪ್ಪ ಮಸ್ಕಿ, ಡಾ.ಪ್ರಕಾಶ ಜಡಿಯವರ, ಡಾ.ಮಹಾಂತೇಶ ನೆಲಾಗಣಿ ಹಾಗೂ ಡಾ.ವಿಜಯಕುಮಾರ್.ಕೆ. ಅವರನ್ನು ಸತ್ಕರಿಸಲಾಯಿತು.
ಕುಮಾರಿ ಬೃಂದಾ ಎಂ.ಸಿ. ಪ್ರಾರ್ಥಿಸಿದರು. ಶಿವಮೂರ್ತಿ ಗುತ್ತೂರು ಸ್ವಾಗತಿಸಿದರು. ಜ್ಞಾನೇಶ್ವರ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಕರುಗಲ್ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್