ಬಳ್ಳಾರಿ, 01 ಜೂನ್ (ಹಿ.ಸ.) :
ಆ್ಯಂಕರ್ : ಮೊಬೈಲ್ ಓದು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ವಿದ್ಯಾರ್ಥಿಗಳು ಮೊಬೈಲ್ನಿಂದ ದೂರವೇ ಇದ್ದು, ಸಾಧನೆ ಮಾಡಬೇಕು ಎಂದು ಕುರುಗೋಡಿನ ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಅಲ್ಲೀಪುರ ಶ್ರೀ ಮಹದೇವ ತಾತ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು 10 ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಆಶೀರ್ವಚನದಲ್ಲಿ ಶ್ರೀಗಳು ಮಾತನಾಡಿದರು.
ಮೊಬೈಲ್ ಅನೇಕರ ಕೈಗಳ ಫ್ಯಾಷನ್ ಆಗಿದೆ. ವಿದ್ಯಾರ್ಥಿಗಳು ಮೊಬೈಲ್ ಬದಲಾಗಿ ಪುಸ್ತಕವನ್ನು ಹಿಡಿದಲ್ಲಿ, ಮಸ್ತಕಕ್ಕೂ ಆರೋಗ್ಯ - ಕಲಿಕೆಗೂ ಪ್ರೋತ್ಸಾಹ ಸಿಗಲಿದೆ. ಪುಸ್ತಕ - ಮಸ್ತಕ ವಿದ್ಯಾರ್ಥಿಗಳ ಜೀವನವಾದಲ್ಲಿ ಸಾಧನೆ ಸುಲಭವಾಗಲಿದೆ ಎಂದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಭದ್ರಯ್ಯ ಅವರು, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ. ಈಬಾರಿ 300 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಅಭಿನಂದಿಸಲಾಗಿದೆ. ಮುಂದಿನ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಗಲಿ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಂದೀಪುರ ಮಠದ ಡಾ. ಮಹೇಶ್ವರ ಮಹಾಸ್ವಾಮಿಗಳು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶೀಕರು ವಹಿಸಿದ್ದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ಯಶವಂತ್ ಭೋಪಾಲ್, ಎಂ.ಜಿ. ಗೌಡ, ಕಣೇಕಲ್ಲು ಡಾ. ಮಹಾಂತೇಶ್, ದರೂರು ಶಾಂತನಗೌಡ ಹಾಗೂ ಇನ್ನಿತರರು ಪ್ರತಿಭಾವಂತರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ಸುರೇಖಾ ಮಲ್ಲನಗೌಡ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಎಸ್.ಎಂ. ವಾಗೀಶ್ ಶಿವಾಚಾರ್ಯ, ಪತ್ರಿ ಬಸಪ್ಪ ವಿಶ್ವನಾಥ್ ಹಿರೇಗೌಡ, ದಂಡಿನ ಶಿವಾನಂದ, ಡಾ. ಅರವಿಂದ ಪಟೇಲ್, ಕೋರಿ ವಿರೂಪಾಕ್ಷಪ್ಪ ಅಲ್ಲಂ ಪ್ರಶಾಂತ್, ಸಂಗನಕಲ್ಲು ಬಸವರಾಜ್, ಮಸೀದಿಪುರದ ಸಿದ್ದರಾಮನಗೌಡ ಸೇರಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದದರು.
ಕಿಷ್ಕಿಂದ ವಿಶ್ವವಿದ್ಯಾಲಯದ ಡಾ. ಎಸ್. ಮಂಜುನಾಥ್ ಅವರು `ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರದ ವಿದ್ಯಾಭ್ಯಾಸ ಮತ್ತು ಉದ್ಯೋಗಗಳು' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್.ಎಚ್.ಎಂ. ಚನ್ನಬಸವ ಸ್ವಾಮಿ, ಕೋಶಾಧ್ಯಕ್ಷ ಕೋಳೂರು ವೆಂಕಟೇಶಗೌಡ, ಪ್ರಧಾನ ಕಾರ್ಯದರ್ಶಿ ಬಿಸಿಲಹಳ್ಳಿ ಬಸವರಾಜ್ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು ಮತ್ತು ವೀರಶೈವ ಲಿಂಗಾಯತ ಸಮಾಜ ಗಣ್ಯರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್