ಗದಗ, 01 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದು, ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ರೈತರು ಬಿತ್ತನೆಗೆ ಅವಸರ ಮಾಡದೇ, ಬಿತ್ತಿದ ಮತ್ತು ಇನ್ನೂ ಬಿತ್ತಬೇಕಾದ ಹೊಲಗಳಲ್ಲಿ ನಿಂತಿರುವ ನೀರನ್ನು ಹೊರ ಹಾಕಬೇಕು. ಮಣ್ಣಿನಲ್ಲಿ ಅತಿಯಾದ ತೇವಾಂಶವಿದ್ದಲ್ಲಿ ಬಿತ್ತುವುದನ್ನು ಮುಂದೂಡಬೇಕು.
ಹೆಸರು ಬಿತ್ತನೆಗೆ ಇನ್ನೂ ಒಂದು ವಾರ ಸಮಯವಿದೆ. ಗೋವಿನ ಜೋಳ, ಉದ್ದು, ಹತ್ತಿ, ಈರುಳ್ಳಿ, ಶೇಂಗಾ, ತೊಗರಿ ಇತ್ಯಾದಿ ಬಿತ್ತನೆ ಮಾಡಲು ಸಾಕಷ್ಟು ಸಮಯವಿದೆ. ಈಗಾಗಲೇ ಬಿತ್ತಿದ ಬೆಳೆಗಳು ಚಿಕ್ಕದಾಗಿ ಇರುವದರಿಂದ, ಭತ್ತವನ್ನು ಹೊರತುಪಡಿಸಿ ಉಳಿದ ಬೆಳೆೆಗಳ ಜಮೀನಿನಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಸತತವಾಗಿ ಮಳೆ ಬಿದ್ದಿರುವದರಿಂದ ಬೆಳೆಗೆ ಅವಶ್ಯವಿರುವ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಗಂಧಕಗಳು ನೀರಿನ ಜೊತೆ ಬಸಿದು ಹೋಗಿ ಪೋಷಕಾಂಶಗಳ ಕೊರತೆ ಉಂಟಾಗಬಹುದಾಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆ ಬೆಳವಣಿಗೆಗೆ ಬೇಕಾದ ಬೆಳಕು ಮತ್ತು ಶಾಖದ ಕೊರತೆ ಉಂಟಾಗಿ ದ್ಯುತಿಸಂಶ್ಲೇಷಣಾ ಕ್ರಿಯೆಯಲ್ಲಿ ಬಾಧೆ ಉಂಟಾಗುತ್ತದೆ. ಇದರಿಂದ ಆರಂಭಿಕ ಹಂತದಲ್ಲಿರುವ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಚಿಕ್ಕದಾಗಿ ಇರುವ ಬೆಳೆಗಳಲ್ಲಿ ಪೋಷಕಾಂಶದ ಕೊರತೆ ಲಕ್ಷಣಗಳು ಕಂಡುಬಂದಲ್ಲಿ ತಾತ್ಕಾಲಿಕವಾಗಿ ಪೋಷಕಾಂಶಗಳನ್ನು ನೀಡಿ ಬೆಳೆ ಸಂರಕ್ಷಿಸುವದು. ಮಳೆ ಬಿಡುವು ಕೊಟ್ಟಾಗ ಕೂಡಲೇ ಎಡೆ ಹೊಡೆದು ಗೊಬ್ಬರ ಕೊಡಿ.
ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿರುವ ಹೆಸರು ಬೆಳೆಗೆ ಪೋಷಕಾಂಶದ ಕೊರತೆಯಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ನ್ಯಾನೊ ಯೂರಿಯಾ ಅಥವಾ ಶೇ.100 ನೀರಿನಲ್ಲಿ ಕರಗುವ 19:19:19(5.0ಗ್ರಾಂ./ಲೀ.)+ ಲೈಬ್ರೆಲ್ ಟಿಎಂಎಕ್ಸ್ (1-1.25 ಗ್ರಾಂ./ಲೀ.)ನ್ನು ಸಿಂಪರಣೆ ಮಾಡಲು ತಿಳಿಸಿದೆ. ತುಂತುರು ಮಳೆ ಇದ್ದಾಗ ಸಿಂಪಡಿಸಬೇಕಾದಲ್ಲಿ ಅಂಟುದ್ರಾವಣ(ಉದಾ:ಆಸ್ಪಾ)ವನ್ನು 5ಮಿ.ಲೀ./ಲೀಗೆ ಬೆರೆಸಿ ಸಿಂಪಡಿಸಬೇಕು. ಹೆಸರು ಬೀಜಗಳನ್ನು 10 ಗ್ರಾಂ. ಜೈವಿಕ ಶಿಲೀಂಧ್ರನಾಶಕ ಪ್ರತಿ ಕೆ.ಜಿ.ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತುವುದರಿಂದ ಸರ್ಕೊಸ್ಪೊರಾ ಎಲೆಚುಕ್ಕೆ ರೋಗವನ್ನು ನಿಯಂತ್ರಿಸಬಹುದಾಗಿದೆ.
ಹೆಚ್ಚಿನ ಸ್ಥಳಗಳಲ್ಲಿ ಮಣ್ಣಿನ ತೇವಾಂಶ ಸಾಕಷ್ಟು ಇರುವದರಿಂದ ಬಿತ್ತನೆ ಮಾಡುವಾಗ ಶಿಫಾರಸ್ಸು ಮಾಡಲಾದ ಒಟ್ಟು ಸಾರಜನಕದ 50% ಮತ್ತು ಸಂಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಶ್ ರಸಗೊಬ್ಬರ ಉಪಯೋಗಿಸಲು ಸಲಹೆ ನೀಡಲಾಗಿದೆ. ಹೊಲಗಳಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಲು ಸಾವಯವ ಗೊಬ್ಬರಗಳು, ಹಸಿರೆಲೆ ಗೊಬ್ಬರಗಳ ಬಳಕೆ ಹೆಚ್ಚಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP