ಬೆಂಗಳೂರು, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂವಿಧಾನವನ್ನು ತಮಗೆ ಮನಸ್ಸಿಗೆ ಬಂದ ಹಾಗೆ ತಿರುಚುವುದರಲ್ಲಿ ಕಾಂಗ್ರೆಸ್ಸಿಗರು ಸಿದ್ದಹಸ್ತರು ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದ್ದು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪ್ರಕಟಣೆ ಹಂಚಿಕೊಂಡಿದೆ.
ಈ ಹಿಂದೆ ಶಾಲಾ- ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಎಂಬ ನಿಟ್ಟಿನಲ್ಲಿ ವಸ್ತ್ರಸಂಹಿತೆಯ ಅಡಿಯಲ್ಲಿ ಸಮವಸ್ತ್ರವನ್ನು ಜಾರಿಗೆ ತಂದಿದ್ದೆ ನಾವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.
ಆದರೆ ಯಾವಾಗ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ಸಮಾನತೆಗೆ ವಿರುದ್ಧವಾಗಿ ಹಿಜಾಬ್ ಧರಿಸಿ ಬರುತ್ತಿರುವುದನ್ನು ಪ್ರಶ್ನಿಸಿದರೆ, ಅದಕ್ಕೆ ಕಾಂಗ್ರೆಸ್ಸಿಗರು ಇದು ಬಾಬಾ ಸಾಹೇಬರು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಎಂದು ತೇಪೆ ಹಚ್ಚಿದರು!! ಹೇಗಿದೆ ನೋಡಿ, ಕಾಂಗ್ರೆಸ್ಸಿಗರ ಇಬ್ಬಂದಿತನ!!
ಕೆ.ಪಿ.ಎಸ್.ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಮಹಿಳೆಯೊಬ್ಬರ ಮಾಂಗಲ್ಯಸರವನ್ನು ತೆಗೆಸಿದ್ದರು, ಈ ಬಗ್ಗೆ ಮಾಧ್ಯಮದವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ, “ಏಯ್ ಅದು ನಿಯಮ ಕಣ್ರಿ” ಎಂದು ಅಬ್ಬರಿಸಿದ್ದರು. ಆದರೆ ಅದೇ ಮಾಧ್ಯಮದವರು ಹಾಗಾದರೆ ನಿಯಮದ ಪ್ರಕಾರ ಹಿಜಾಬ್ ಅನ್ನು ಏಕೆ ತೆಗೆಸಲಿಲ್ಲ ಎಂದು ಮರು ಪ್ರಶ್ನೆ ಹಾಕಿದರೆ ಅದಕ್ಕೆ ಕಾಂಗ್ರೆಸ್ಸಿಗರದ್ದು “ನೋ ಕಾಮೆಂಟ್ಸ್..ನೋ ಕಾಮೆಂಟ್ಸ್”
ಈಗ ಬೀದರ್ ನಲ್ಲಿ ಸಿಇಟಿ ಪರೀಕ್ಷೆಗೆ ಜನಿವಾರ ಧರಿಸಿ ಬಂದಿದ್ದ ಎಂಬ ಏಕೈಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿಲ್ಲ, ಸಾಲದ್ದಕ್ಕೆ ಜನಿವಾರವನ್ನು ಕಟ್ ಮಾಡಿಕೊಂಡು ಬಾ, ಹಾಗಿದ್ದರೆ ಮಾತ್ರ ಪರೀಕ್ಷೆ ಬರೆಯಲು ನಿನಗೆ ಅವಕಾಶ ನೀಡುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.
ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಆಗಲಿ ಅಥವಾ ಇತರ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಸಹ ಉಲ್ಲೇಖವಾಗಿರಲಿಲ್ಲ. ಹಾಗಿದ್ದ ಮೇಲೆ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀಡದಿರುವುದು ಏಕೆ..ಈ ಅನ್ಯಾಯಕ್ಕೆ ಯಾರು ಹೊಣೆ..??
ದೂರದ ಉತ್ತರಪ್ರದೇಶದಲ್ಲಿ ದನಗಳ್ಳನ ಮೇಲೆ ಹಲ್ಲೆಯಾದರೆ ತಮ್ಮ ಮನಸ್ಸಿಗೆ ಅಪಾರ ದುಃಖವಾಗಿದೆ ಎಂದು ಪುಟಗಟ್ಟಲೆ ಟ್ವೀಟಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮದೆ ಆಡಳಿತವಿರುವ ರಾಜ್ಯದಲ್ಲಿ ವಿದ್ಯಾರ್ಥಿಯೊಬ್ಬನ ಉಜ್ವಲ ಭವಿಷ್ಯವನ್ನು ಮಂಕಾಗಿಸಿರುವ ಘಟನೆಯ ಬಗ್ಗೆ ಏಕೆ ಇದುವರೆಗೂ ಬಾಯ್ಬಿಟ್ಟಿಲ್ಲ..??
ಸಂವಿಧಾನದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಕಾಂಗ್ರೆಸ್ಸಿಗರಿಗೆ ಜನಿವಾರ ಧರಿಸಿದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ..!! ಉತ್ತರಿಸಿ ಕರ್ನಾಟಕ ಕಾಂಗ್ರೆಸ್ ಎಂದು ಬರೆಯಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa