ಗದಗ, 31 ಮಾರ್ಚ್ (ಹಿ.ಸ.) :
ಆ್ಯಂಕರ್ : ಹೈಟೆಕ್ ದರೋಡೆಕೋರರ ತಂಡದ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ನಡುವೆ ನಡೆದಿದೆ.
ಮುಂಜಾನೆ ಈ ಘಟನೆ ನಡೆದಿದ್ದು, ಈ ವೇಳೆ ಕುಖ್ಯಾತ ದರೋಡೆಕೋರ ಜಯಸಿಂಹ ಮೊಡಕೆರ್ ಕಾಲಿಗೆ ಎರಡು ಸುತ್ತು ಗುಂಡೇಟು ತಗುಲಿದೆ.
ರಾಜ್ಯ ಹಾಗೂ ಅಂತಾರಾಜ್ಯಕ್ಕೆ ಸವಾಲಾಗಿದ್ದ ತಂಡ, ರಾಜ್ಯ ಹಾಗೂ ಅಂತಾರಾಜ್ಯ ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಈ ತಂಡ, ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾಗ್ರಾಂ ಮೂಲಕ ಸಂವಹನ ನಡೆಸುತ್ತಿತ್ತು. ಹೀಗಾಗಿ ಪೊಲೀಸರು ತಂಡದ ಮೇಲೆ ನಿಗಾ ಇರಿಸಿಕೊಂಡಿದ್ದರು. ಕೊನೆಗೂ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಗದಗ ಪೊಲೀಸರ ತಂತ್ರ ಫಲ ನೀಡಿದೆ.
ನಿನ್ನೆ ವಿಜಯನಗರ ಜಿಲ್ಲೆ ಬಳಿ ಪೊಲೀಸರು ಜಯಸಿಂಹನನ್ನು ವಶಕ್ಕೆ ಪಡೆದು ಗದಗದ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್, ಮತ್ತು ಜಯಸಿಂಹ ಮೊಡಕೆರ್ ಅವರನ್ನು ಪೊಲೀಸರು ಒಟ್ಟಿಗೆ ಕರೆದುಕೊಂಡು ಬರುತ್ತಿದ್ದರು.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ಮಧ್ಯೆ ಪೊಲೀಸ್ ವಾಹನದಲ್ಲಿಯೇ ಕುಖ್ಯಾತ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆತ್ಮರಕ್ಷಣೆಗಾಗಿ ಸಿಪಿಐ ಮಂಜುನಾಥ ಕುಸುಗಲ್ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದಕ್ಕೂ ಜಗ್ಗದ ಆರೋಪಿ ಜಯಸಿಂಹ ಎಡಗಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದು, ಜಯಸಿಂಹನ ಕಾಲಿಗೆ ಗುಂಡು ತಗಲಿದೆ.
ಗಾಯಗೊಂಡ ಆರೋಪಿಯನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದ ಗದಗ ಎಸ್ಪಿ ಬಿ.ಎಸ್. ನೇಮಗೌಡ ಅವರು ಗಾಯಾಳು ಆರೋಪಿ ಮತ್ತು ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿಯ ಆರೋಗ್ಯ ವಿಚಾರಿಸಿದರು. ಅವರು ಘಟನೆಯ ಕುರಿತು ಪೊಲೀಸರಿಂದ ವಿವರಗಳನ್ನ ಪಡೆದುಕೊಂಡರು. ಅಲ್ಲದೇ ಗುಂಡು ನಡೆದ ಹಾರಿಸಿದ ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಯಸಿಂಹ ಮತ್ತು ಅವನ ತಂಡ ರಾಜ್ಯದ ಹಲವಾರು ಕಡೆಗಳಲ್ಲಿ ದರೋಡೆ, ಮನೆ ಕಳ್ಳತನ, ಮತ್ತು ಇತರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಕ್ರಿಮಿನಲ್ ಚಟುವಟಿಕೆಗಳು ಅಂತ್ಯವಾಗಲು ಗದಗ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಘಟನೆ ರಾಜ್ಯದ ಎಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯ ಆರೋಪಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ಅಪರಾಧಿಗಳಿಗೆ ದಿಟ್ಟ ಕ್ರಮ. ಸದ್ಯ ಮುಂಡರಗಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP