
ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮಾಲೀಕರು ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ತಪ್ಪಿದಲ್ಲಿ ಉದ್ದಿಮೆಗಳ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರ ಪರವಾನಿಗೆಗಳನ್ನು ರದ್ದುಪಡಿಸಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮುದ್ರಣದಾರರು ಜಾಹೀರಾತು ಮುದ್ರಿಸುವ ಸಮಯದಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಲು ಸರ್ಕಾರದಿಂದ ಕಾಯ್ದೆ ಜಾರಿಯಾಗಿದೆ.
ಹಾಗಾಗಿ ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಮಾಲೀಕರು ಪ್ರಧಾನವಾಗಿ ಶೇಕಡ 60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರತಕ್ಕದ್ದು.
ನಾಮಫಲಕದಲ್ಲಿ ಕನ್ನಡ ಭಾಷೆ ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗುವಂತೆ ಹಾಗೂ ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ಭಾಷೆ ನಾಮಫಲಕ ಮೇಲ್ಭಾಗದಲ್ಲಿರುವಂತೆ ಹಾಗೂ ದೊಡ್ಡದಾಗಿರುವಂತೆ ಅಳವಡಿಸಬೇಕು.
ಜನವರಿ 05 ರೊಳಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರು ನಾಮಫಲಕಗಳು ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಪ್ರಧಾನವಾಗಿ ಕನ್ನಡ ಬಳಸಬೇಕು.
ತಪ್ಪಿದಲ್ಲಿ ಅಂತಹ ನಾಮಫಲಕ, ಮುದ್ರಣ ಜಾಹೀರಾತುಗಳನ್ನು ತೆರವುಗೊಳಿಸಿ ನಿಯಮಾನುಸಾರ ದಂಡವಿಧಿಸಿ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್