
ಬಳ್ಳಾರಿ, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತವಾಗಿ ತಪಾಸಣೆ ಕೈಗೊಂಡಾಗ ನಿಷೇಧಿತ ವಸ್ತುಗಳು ದೊರೆತಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ಅವರ ನಿರ್ದೇಶನದ ಮೇರೆಗೆ ‘ಕಾರಾಗೃಹ ಸುಧಾರಣಾ ಸಂಕಲ್ಪ' ಅಭಿಯಾನದಡಿ ಡಿ.20ರ ರಾತ್ರಿ 10 ರಿಂದ 12.10 ರವರೆಗೆ ಕಾರಾಗೃಹದ ಅಧೀಕ್ಷಕರ ನೇತೃತ್ವದಲ್ಲಿ ಜೈಲರ್, ಸಹಾಯಕ ಜೈಲರ್ ಹಾಗೂ ಹಗಲು, ರಾತ್ರಿ ಪಹರೆಯ ಸಿಬ್ಬಂದಿ ಒಳಗೊಂಡ ತಂಡವು ಕಾರಾಗೃಹದ ಒಳ ಆವರಣದಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಂಡಾಗ ನಿಷೇಧಿತ ವಸ್ತುಗಳಾದ 6 ಕೀ-ಪ್ಯಾಡ್ ಮೊಬೈಲ್ ಮತ್ತು 2 ಚಾರ್ಜರ್ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಿದವರು, ಇದಕ್ಕೆ ಸಹಕರಿಸಿದವರು ಹಾಗೂ ನಿಷೇಧಿತ ವಸ್ತುಗಳನ್ನು ಉಪಯೋಗಿಸಿದವರ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022ರ ಕಲಂ 42ರನ್ವಯ ಹಾಗೂ ಇತರೆ ಕಲಂಗಳಡಿ ಕ್ರಮ ಕೈಗೊಳ್ಳಲು ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (ಸಂಖ್ಯೆ: 233/2025) ದಾಖಲಿಸಲಾಗಿದೆ.
ಸಿಬ್ಬಂದಿಗೆ ಬಹುಮಾನ:
ತಪಾಸಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಡಿಜಿಪಿ ಅಲೋಕ ಕುಮಾರ್ ಅವರು, ತಂಡಕ್ಕೆ ರೂ.10,000 ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ ಎಂದು ಕೇಂದ್ರ ಕಾರಾಗೃಹ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್