
ಹುಬ್ಬಳ್ಳಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ರೈಲ್ವೆಗೆ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ.
2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ ರೈಲ್ವೆ ದಾಖಲಿಸಿದ್ದು, ಇದರಿಂದ ಬರೋಬ್ಬರಿ 5.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ (ನವೆಂಬರ್ 2024) ಇದೇ ಅವಧಿಗೆ ಹೋಲಿಸಿದರೆ, ಪ್ರಕರಣಗಳ ಸಂಖ್ಯೆಯಲ್ಲಿ ಶೇ. 24ರಷ್ಟು ಮತ್ತು ಆದಾಯದಲ್ಲಿ ಶೇ. 60ರಷ್ಟು ದಾಖಲೆಯ ಏರಿಕೆ ಕಂಡುಬಂದಿದೆ. ನವೆಂಬರ್ 2024 ರಲ್ಲಿ 54,000 ಪ್ರಕರಣಗಳಿಂದ 3.35 ಕೋಟಿ ರೂ. ಸಂಗ್ರಹವಾಗಿತ್ತು.
ಏಪ್ರಿಲ್ 1 ರಿಂದ ನವೆಂಬರ್ 30, 2025 ರವರೆಗಿನ ಸಂಚಿತ ಅವಧಿಯಲ್ಲಿ, ಎಸ್ಡಬ್ಲ್ಯೂಆರ್ 5.57 ಲಕ್ಷ ಟಿಕೆಟ್ ತಪಾಸಣಾ ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಮೂಲಕ ಒಟ್ಟು 45.89 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ (2024–25) ಅನುಗುಣವಾದ ಅವಧಿಯಲ್ಲಿ 4.8 ಲಕ್ಷ ಪ್ರಕರಣಗಳಿಂದ 32.87 ಕೋಟಿ ರೂ. ಆದಾಯವಿತ್ತು. ಇದರರ್ಥ, ಈ ಅವಧಿಯಲ್ಲಿ ಪ್ರಕರಣಗಳಲ್ಲಿ ಶೇ. 16ರಷ್ಟು ಮತ್ತು ಆದಾಯದಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಿದಂತಾಗಿದೆ.
ನಿರಂತರವಾಗಿ ನಡೆಸಿದ ಟಿಕೆಟ್ ತಪಾಸಣಾ ಅಭಿಯಾನಗಳು, ವಿಶೇಷ ತಪಾಸಣೆಗಳು ಮತ್ತು ರೈಲು ನಿಲ್ದಾಣಗಳಲ್ಲಿ ಹಾಗೂ ಪ್ರಯಾಣಿಸುವ ರೈಲುಗಳಲ್ಲಿ ಹಠಾತ್ ತಪಾಸಣೆಗಳನ್ನು ನಡೆಸಿದ ಫಲಿತಾಂಶವೇ ಈ ಸುಧಾರಿತ ಸಾಧನೆಗೆ ಕಾರಣವಾಗಿದೆ. ಈ ಉಪಕ್ರಮಗಳು ಅನಧಿಕೃತ ಪ್ರಯಾಣವನ್ನು ತಡೆಯುವ ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸುವ ಗುರಿ ಹೊಂದಿವೆ.
ಮುಂಬರುವ ಹಬ್ಬಗಳು ಮತ್ತು ಗರಿಷ್ಠ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ, ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಟಿಕೆಟ್ ತಪಾಸಣಾ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಸ್ಡಬ್ಲ್ಯೂಆರ್ ತಿಳಿಸಿದೆ. ಪ್ರಯಾಣಿಕರು ಯಾವಾಗಲೂ ಮಾನ್ಯವಾದ ಟಿಕೆಟ್ಗಳೊಂದಿಗೆ ಪ್ರಯಾಣಿಸುವಂತೆ ಅದು ಮನವಿ ಮಾಡಿದೆ.
ನೈಋತ್ಯ ರೈಲ್ವೆಯು ಎಲ್ಲಾ ಪ್ರಯಾಣಿಕರು ಯಾವಾಗಲೂ ಮಾನ್ಯವಾದ ಟಿಕೆಟ್ಗಳು ಮತ್ತು ಸೂಕ್ತ ಅಧಿಕಾರದೊಂದಿಗೆ ಪ್ರಯಾಣಿಸುವಂತೆ ಮನವಿ ಮಾಡಿದೆ. ಮುಂಬರುವ ಹಬ್ಬದ ಮತ್ತು ಗರಿಷ್ಠ ಪ್ರಯಾಣದ ಅವಧಿಯಲ್ಲಿ, ಸುರಕ್ಷಿತ, ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಟಿಕೆಟ್ ತಪಾಸಣಾ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ನೈಋತ್ಯ ರೇಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa