
ನವದೆಹಲಿ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಗುರುನಾನಕ್ ಜಯಂತಿ ಹಾಗೂ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
“ಗುರುನಾನಕ್ ದೇವ್ ಜಿಯವರ ಕರುಣೆ, ಸಮಾನತೆ, ನಮ್ರತೆ ಮತ್ತು ಸೇವೆಯ ಬೋಧನೆಗಳು ಮಾನವಕುಲಕ್ಕೆ ಶಾಶ್ವತ ಸ್ಪೂರ್ತಿ. ಅವರ ದೈವಿಕ ಬೆಳಕು ನಮ್ಮ ಗ್ರಹವನ್ನು ಸದಾ ಬೆಳಗಿಸಲಿ” ಎಂದು ಮೋದಿ ತಮ್ಮ ಎಕ್ಸ ಖಾತೆಯಲ್ಲಿ ಬರೆದಿದ್ದಾರೆ.
ಮೋದಿ ಅವರು ಕಾರ್ತಿಕ ಪೂರ್ಣಿಮೆ ಮತ್ತು ದೇವ ದೀಪಾವಳಿಗೂ ಶುಭಾಶಯ ಕೋರಿ, ಈ ಪವಿತ್ರ ಸಂದರ್ಭಗಳು ಸಂತೋಷ, ಶಾಂತಿ ಮತ್ತು ಆರೋಗ್ಯ ತರಲಿ ಎಂದು ಆಶಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರೂ ಗುರುನಾನಕ್ ಜಯಂತಿಯ ಶುಭಾಶಯಗಳನ್ನು ಕೋರಿದರು.
ರಾಷ್ಟ್ರಪತಿ ಮುರ್ಮು ಅವರು “ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಸಿಖ್ ಸಹೋದರ-ಸಹೋದರಿಯರಿಗೆ ಹೃತ್ಪೂರ್ವಕ ಶುಭಾಶಯಗಳು” ಎಂದಿದ್ದಾರೆ.
ಓಂ ಬಿರ್ಲಾ ಅವರು “ಗುರುನಾನಕ್ ದೇವ್ ಜಿ ಮಾನವೀಯತೆ, ಸಮಾನತೆ ಮತ್ತು ಸತ್ಯದ ಆದರ್ಶಗಳಿಂದ ಜಗತ್ತನ್ನು ಬೆಳಗಿಸಿದರು” ಎಂದು ನಮನ ಸಲ್ಲಿಸಿದರು.
ಅಮಿತ್ ಶಾ ಅವರು “ಗುರುನಾನಕ್ ದೇವ್ ಜಿ ಭಕ್ತಿಯನ್ನು ಜೀವನದ ಮೂಲ ಮಂತ್ರವೆಂದು ಘೋಷಿಸಿ, ಅನ್ಯಾಯದ ವಿರುದ್ಧ ನಿಲ್ಲಲು ಪ್ರೇರೇಪಿಸಿದರು. ಲಂಗರ್ ಸಂಪ್ರದಾಯದ ಮೂಲಕ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಿದರು” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa