ವಿಜಯಪುರ, 08 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಪ್ರಕರಣ ನ್ಯಾಯವಾದಿಯ ವರ್ತನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಘಟನೆಯನ್ನು ಖಂಡಿಸಿ ಅಕ್ಟೋಬರ್ 16 ರಂದು ವಿಜಯಪುರ ನಗರ ಬಂದ್ಗೆ ಪ್ರಗತಿ ಪರ ಸಂಘಟನೆಗಳು ಮತ್ತು ದಲಿತ ಪರ ಸಂಘಟನೆಗಳಿಂದ ಕರೆ ನೀಡಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ರಾಜೂ ಆಲಗೂರು ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಅಕ್ಟೋಬರ್ 16 ರಂದು ವಿಜಯಪುರ ಬಂದ್ಗೆ ಎಲ್ಲ ಒಕ್ಕೂಟದಿಂದ ಬೆಂಬಲ ವ್ಯಕ್ತವಾಗಿದೆ. ಇನ್ನೂ ಸಿಜೆಐ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆಯಾಗಿದೆ. ಮನುವಾದಿ ಸಂಸ್ಕೃತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದವಾದ ಸಿದ್ದಾಂತ ಹೇಳುವ ಆರ್ಎಸ್ಎಸ್ ಹಾಗೂ ಇತರೆ ನಾಯಕರು ಸಿಐಜೆ ಅವರ ಮೇಲೆ ನಡೆದ ಘಟನೆ ಕುರಿತು ನಾಳೆಯ ಸಭೆಯಲ್ಲಿ ಖಂಡಿಸಲಿ ಎಂದು ಮುಖಂಡರು ಸವಾಲು ಹಾಕಿದರು.
ಅವಕಾಶ ಕೊಟ್ಟರೆ ಸಿಐಜೆ ಗವಾಯಿ ಅವರ ಎದೆ ಸೀಳುತ್ತೇನೆಂದು ಹೇಳಿದ ಕಥಾವಾಚಕರೊಬ್ಬರು ಹೇಳಿದ್ದು ದುರ್ದೈವ ಎಂದು ಮಾಜಿ ಶಾಸಕ ರಾಜೂ ಆಲಗೂರ ಕಿಡಿಕಾರಿದರು.
ಓರ್ವ ಯೂಟ್ಯೂಬರ್ ಸಹ ಸಿಐಜೆ ಗವಾಯಿ ಅವರ ವಿರುದ್ಧ ಮೊದಲಿನಿಂದಲೂ ಅವಮಾನಕಾರಿ ವಿಡಿಯೋ ಹಾಕಿದ್ಧಾನೆಂದು ಆರೋಪ ಮಾಡಿದರು.
ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿರುವ ನ್ಯಾಯವಾದಿ ಹಿಂದೆ ದೊಡ್ಡ ಶಕ್ತಿಯಿದೆ. ಆ ಶಕ್ತಿಯ ಧೈರ್ಯದಿಂದ ಶೂ ಎಸೆದಿದ್ದಾರೆ. ಇದೇ ವೇಳೆ ದಲಿತ ಪರ ಮುಖಂಡರು ಆರ್ಎಸ್ಎಸ್ ವಿರುದ್ದ ಗುಡುಗಿದರು.
ಈ ಘಟನೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ದಲಿತ ಪರ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಅಕ್ಟೋಬರ್ 16 ರಂದು ವಿಜಯಪುರ ಜಿಲ್ಲೆ ಬಂದ್ ಮಾಡಲಾಗುತ್ತದೆ. ಅಂದು ಶಾಲಾ ಕಾಲೇಜು, ಅಂಗಡಿ ಮುಂಗಟ್ಟು ಬಂದ್ ಆಗಲಿದೆ. ಜನರು, ವ್ಯಾಪಾರಿಗಳು, ಸಂಘಸಂಸ್ಥೆಗಳು ಸಹಕರಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande