6 ವರ್ಷಗಳಲ್ಲಿ ರಾಜ್ಯಕ್ಕೆ 19.2 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸೇರ್ಪಡೆ: ಗೌರವ್‌ಗುಪ್ತಾ
ಗಾಂಧಿನಗರ, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ರಾಜ್ಯದ ನವೀಕರಿಸಬಹುದಾದ ಇಂಧನದ ಈಗಿನ 18 ಗಿ.ವ್ಯಾ. ಸಾಮರ್ಥ್ಯದ ಜತೆಗೆ ಮುಂದಿನ 6 ವರ್ಷಗಳಲ್ಲಿ 19.2 ಗಿ.ವ್ಯಾ. ಸೇರ್ಪಡೆಗೊಳಿಸಲಾಗುವುದು ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಹೇಳಿದ್ದಾರೆ. ಗುಜರಾತಿನ ಗಾಂಧಿನಗರದ ಮಹಾತ್ಮ
Seminar


ಗಾಂಧಿನಗರ, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ರಾಜ್ಯದ ನವೀಕರಿಸಬಹುದಾದ ಇಂಧನದ ಈಗಿನ 18 ಗಿ.ವ್ಯಾ. ಸಾಮರ್ಥ್ಯದ ಜತೆಗೆ ಮುಂದಿನ 6 ವರ್ಷಗಳಲ್ಲಿ 19.2 ಗಿ.ವ್ಯಾ. ಸೇರ್ಪಡೆಗೊಳಿಸಲಾಗುವುದು ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಹೇಳಿದ್ದಾರೆ.

ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರ ಸಭಾಂಗಣದಲ್ಲಿ ನಡೆಯುತ್ತಿರುವ 3 ದಿನಗಳ 'ನವೀಕರಿಸಬಹುದಾದ ಇಂಧನ ಹೂಡಿಕೆ ಸಮಾವೇಶ'ದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, 2030ರ ವೇಳೆಗೆ ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು 500 ಗಿ.ಗ್ಯಾ. ಹೆಚ್ಚಿಸಬೇಕೆಂಬ ಸಂಕಲ್ಪಕ್ಕೆ ಬದ್ಧವಾಗಿ ರಾಜ್ಯದ ಹಸಿರು ಇಂಧನ ಉತ್ಪಾದನೆ ಸಾಮರ್ಥ್ಯಕ್ಕೆ ಮುಂದಿನ 6 ವರ್ಷಗಳಲ್ಲಿ 19.2 ಗಿ.ವ್ಯಾ. ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗುವುದು. ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರ ಮಾರ್ಗದರ್ಶನದಲ್ಲಿ ಈ ಹೊಸ ಸಂಕಲ್ಪ ಸಾಕಾರಗೊಳಿಸಲಾಗುವುದು, ಎಂದರು.

ಪಾವಗಡ ಸೋಲಾರ್‌ ಪಾರ್ಕ್‌ ಎರಡನೇ ಅತಿ ದೊಡ್ಡ ಸೋಲಾರ್ ಪಾರ್ಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪವನ ವಿದ್ಯುತ್‌ ಸಾಮರ್ಥ್ಯದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದ್ದು, ಒಟ್ಟಾರೆ ಸೌರ ವಿದ್ಯುತ್‌ ಸಾಮರ್ಥ್ಯದಲ್ಲೂ ರಾಜ್ಯ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆ ಜಲವಿದ್ಯುತ್‌ ಸಾಮರ್ಥ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಈ ನಾಲ್ಕು ವಲಯಗಳಲ್ಲಿನ ರಾಜ್ಯದ ಸಾಧನೆಗಾಗಿ ಸಮಾವೇಶದಲ್ಲಿ ಕೆಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್‌ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು, ಎಂದು ಹರ್ಷ ವ್ಯಕ್ತಪಡಿಸಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಉತ್ತೇಜನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಹಸಿರು ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ಈಗಾಗಲೇ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಜತೆಗೆ ಈ ವಲಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಅಲ್ಲದೇ, ಯೋಜನೆಗಳು ಸಕಾಲದಲ್ಲಿ ಕಾರ್ಯಗತಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪೂರಕ ನೀತಿ ರೂಪಿಸಲಾಗಿದೆ. ಉದಾಹರಣೆಗೆ, ಭೂಸ್ವಾಧೀನ ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದೇವೆ. ತ್ವರಿತ ಅನುಮತಿಗಳನ್ನು ನೀಡಿದ್ದೇವೆ ಮತ್ತು ರಾಜ್ಯದ ಕೈಗಾರಿಕಾ ನೀತಿಗೆ ಅನುಗುಣವಾಗಿ ಯೋಜನೆಗಳಿಗೆ ಪ್ರೋತ್ಸಾಹಕಗಳನ್ನು ಒದಗಿಸಿದ್ದೇವೆ. ಈ ಕ್ರಮಗಳಿಂದಾಗಿ ಕರ್ನಾಟಕವು ಹೂಡಿಕೆಗೆ ಆದ್ಯತೆಯ ತಾಣವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣವೂ ಹೆಚ್ಚಿದೆ, ಎಂದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪಯ್ಯ ಮಾತನಾಡಿ, 2023-24ರ ಆರ್ಥಿಕ ವರ್ಷದಲ್ಲಿಯೇ ನಾವು 1,027 ಮೆಗಾವ್ಯಾಟ್‌ ಸಾಮರ್ಥ್ಯದ ಪವನ ಯೋಜನೆಗಳನ್ನು ನಿಯೋಜಿಸಿದ್ದೇವೆ. ಸ್ಥಿರ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆಯ ಖಾತ್ರಿಗಾಗಿ ಸೌರ ಮತ್ತು ಪವನ ಶಕ್ತಿಯನ್ನು ಸಂಯೋಜಿಸಲಾಗುತ್ತಿದೆ. ಉದ್ಯಮಗಳು ಮತ್ತು ಹೂಡಿಕೆದಾರರಿಗೆ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದೆ,ಎಂದು ತಿಳಿಸಿದರು.

ಹೊಯ್ಸಳ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಕರ್ನಾಟಕದ ಮಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ನವೀಕರಿಸಬಹುದಾದದ ಇಂಧನ- ಸೌರ (ಪಾವಗಡ ಸೋಲಾರ್‌ ಪಾರ್ಕ್‌), ರಾಜ್ಯದ ಪವನ ವಿದ್ಯುತ್‌, ಜೈವಿಕ ಇಂಧನ, ಕಿರು ಜಲ ವಿದ್ಯುತ್‌ ಯೋಜನೆಗಳ ಬಗ್ಗೆ ಪ್ರಧಾನಿಗೆ ಗೌರವ ಗುಪ್ತಾ ವಿವರಿಸಿದರು. ಪ್ರಧಾನಿ ಮೋದಿ ಅವರ ಜತೆ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್‌ ಜೋಶಿ ಭೇಟಿ ನೀಡಿ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆಗಳ ಕುರಿತಂತೆ ಮಾಹಿತಿ ಪಡೆದರು.

ಸಮಾವೇಶದಲ್ಲಿ 4 ಪಾಲುದಾರ ರಾಷ್ಟ್ರಗಳು, 7 ಪಾಲುದಾರ ರಾಜ್ಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಖಾಸಗಿ ಸಂಸ್ಥೆಯ ಪ್ರತಿನಿಧಿಳು, ಹೂಡಿಕೆದಾರರು ಸೇರಿ ಒಟ್ಟು 10,000 ಮಂದಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande