ಹೊಸಪೇಟೆ , 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಸ್ವಚ್ಚತಾ ಹೀ ಸೇವಾ ಪಾಕ್ಷಿಕ–2024ರ ಸ್ವಚ್ಛತಾ-ಹಿ-ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ μÁಹ ಅವರು ಸೆ.18ರಂದು ಚಾಲನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಚ ಭಾರತ್ ಮಿಷನ್ ಸಹಯೋಗದಲ್ಲಿ ಹೊಸಪೇಟೆ ತಾಲ್ಲೂಕಿನ ಐತಿಹಾಸಿಕ ವಿಶ್ವಖ್ಯಾತಿ ಹಂಪಿಯ ವಿಜಯವಿಠಲ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಓ ಅವರು, ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ಉತ್ತಮವಾಗಿರಬೇಕಾದರೆ ನೈರ್ಮಲ್ಯ ಅಗತ್ಯವಾಗಿದೆ.
ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸ್ವಚ್ಚತೆಯ ಕುರಿತು ಜಾಗೃತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ಗ್ರಾಮಗಳಲ್ಲಿ ಎಲ್ಲರ ಭಾಗವಹಿಸುವಿಕೆಯೊಂದಿಗೆ ಸ್ವಚ್ಚತಾ ಹೀ ಸೇವಾ ಪಾಕ್ಷೀಕ–2024 ಆಂದೋಲನ ಕಾರ್ಯಕ್ರಮವನ್ನು ಅಕ್ಟೋಬರ್ 2ರವರೆಗೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಹೊಸಪೇಟೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತ್ ಡಿ. ಅವರು ಸ್ವಚ್ಚತಾ ಹೀ-ಸೇವಾ ಪಾಕ್ಷಿಕ–2024ರ ಆಂದೋಲನದ ಪ್ರತಿಜ್ಞಾ ವಿದಿ ಬೋಧಿಸಿ ಮಾತನಾಡಿ, ಎಲ್ಲಾ ಗ್ರಾಮಗಳಲ್ಲಿ ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳು, ಕಲ್ಯಾಣಿ ಪ್ರದೇಶ, ಶಾಲಾ-ಕಾಲೇಜು ಆವರಣ, ಸರ್ಕಾರಿ ಕಚೇರಿಯ ಆವರಣ, ಬಸ್ ನಿಲ್ದಾಣ, ದೇವಸ್ದಾನ ಹಾಗೂ ಗ್ರಾಮ ಪಂಚಾಯತಿ ಕಟ್ಟಡ ಮತ್ತು ಗ್ರಂಥಾಲಯ ಕಟ್ಟಡಗಳ ಮುಂಭಾಗಗಳಲ್ಲಿ ಹೆಚ್ಚಿನ ರೀತಿಯಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಹಾಗೂ ಸಮುದಾಯಗಳ ಶೌಚಾಲಯ ಬಳಕೆ ಮಾಡಲು ಉತ್ತೇಜಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಅಕ್ಟೋಬರ್ 2ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಅಶೋಕ ಜಿ.ತೋಟದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ದೀಪಾ, ಜಿಲ್ಲಾ ಪಂಚಾಯತನ ಜೆ.ಜೆ.ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ದಾಪಕರಾದ ಮಹೇಶ್ವರಿ, ಎನ್ಆರ್ಎಲ್ಎಂಡಿಪಿಎಂ ಪ್ರಸನ್ನ, ಜಿಲ್ಲಾ ವ್ಯವಸ್ದಾಪಕರಾದ ಕಲಾವತಿ, ಬುಕ್ಕಸಾಗರ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ರಾಜೇಶ್ವರಿ ಹಾಗೂ ಸದಸ್ಯರು, ತಾಪಂ ಹೊಸಪೇಟೆ ನರೇಗಾ ವಿಭಾಗದ ಹೆಚ್ ನಾಗರಾಜ, ಎನ್.ಆರ್.ಎಲ್.ಎಮ್. ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕೊಟ್ರೇಶ್, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ನರೇಗಾ ಕೂಲಿ ಕಾರ್ಮಿಕರು, ಸ್ವಚ್ಚವಾಹಿನಿ ಚಾಲಕರು, ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್