
ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2026-27ನೇ ಸಾಲಿನ ವಿವಿಧ ಸಾಲ ಹಾಗೂ ಸಹಾಯಧನ ಸೌಲಭ್ಯ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ-3ಎ ಅಡಿಯಲ್ಲಿ ಬರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿಗೌಡ, ಉಪ್ಪಿನ ಕೊಳಗ/ಉತ್ತಮ ಕೊಳಗ ಮುಂತಾದ ಒಳಪಂಗಡಗಳ ಸಮುದಾಯದ ಜನರು ಈ ಯೋಜನೆಗಳ ಲಾಭ ಪಡೆಯಬಹುದಾಗಿದೆ.
*ಯೋಜನೆಗಳು ಮತ್ತು ಸೌಲಭ್ಯಗಳ ವಿವರ:*
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
18 ರಿಂದ 55 ವರ್ಷದೊಳಗಿನ ಗ್ರಾಮೀಣ ಪ್ರದೇಶದ (ವಾರ್ಷಿಕ ಆದಾಯ ಮಿತಿ 98,000) ಹಾಗೂ ನಗರ ಪ್ರದೇಶದ (ವಾರ್ಷಿಕ ಆದಾಯ ಮಿತಿ 1,20,000) ನಿರುದ್ಯೋಗಿಗಳು ಅರ್ಹರು.
2,00,000 ಘಟಕ ವೆಚ್ಚದಲ್ಲಿ ಶೇ.30 ರಷ್ಟು (ಗರಿಷ್ಠ 30,000) ಸಹಾಯಧನ ಹಾಗೂ ಉಳಿದ ಶೇ.70 ರಷ್ಟು (1,70,000) ಮೊತ್ತವನ್ನು ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಸಾಲವಾಗಿ ನೀಡಲಾಗುತ್ತದೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆ:
ವಾರ್ಷಿಕ ಆದಾಯ 98,000 ಮಿತಿಯೊಳಗಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. 3.75 ಲಕ್ಷ ಘಟಕ ವೆಚ್ಚದಲ್ಲಿ 3.25 ಲಕ್ಷ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
ಸ್ವಾವಲ0ಬಿ ಸಾರಥಿ ಯೋಜನೆ:
21 ರಿಂದ 45 ವರ್ಷ ವಯಸ್ಸಿನ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಪಡೆಯುವ ಸಾಲಕ್ಕೆ ಶೇ.50 ರಷ್ಟು (ಗರಿಷ್ಠ 3 ಲಕ್ಷ) ಸಹಾಯಧನ ನೀಡಲಾಗುವುದು. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ):
ವಾಣಿಜ್ಯ ಬ್ಯಾಂಕ್ಗಳ ಮೂಲಕ ಪಡೆಯುವ ಉದ್ಯಮ ಸಾಲಕ್ಕೆ ನಿಗಮದಿಂದ ಶೇ.20 ರಷ್ಟು (ಗರಿಷ್ಠ 1 ಲಕ್ಷ) ಸಹಾಯಧನ ಒದಗಿಸಲಾಗುವುದು.
ಶೈಕ್ಷಣಿಕ ಸಾಲ ಯೋಜನೆ (ವೃತ್ತಿಪರ ಕೋರ್ಸ್ಗಳು):
ಸಿಇಟಿ/ನೀಟ್ ಮೂಲಕ ಇಂಜಿನಿಯರಿ0ಗ್, ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷದಂತೆ ಒಟ್ಟು ಕೋರ್ಸ್ ಅವಧಿಗೆ 4 ಲಕ್ಷದಿಂದ 5 ಲಕ್ಷದವರೆಗೆ ಶೇ.2 ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಹಿಂದಿನ ಸಾಲಿನ ಫಲಾನುಭವಿಗಳು ನವೀಕರಣಕ್ಕೂ ಅರ್ಜಿ ಸಲ್ಲಿಸಬಹುದು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ:
ಕ್ಯೂಎಸ್ ಅಥವಾ ಟಿಹೆಚ್ಇ ಜಾಗತಿಕ ರ್ಯಾಂಕಿ0ಗ್ನ 1000 ರೊಳಗಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಪಿಎಚ್ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 25 ಲಕ್ಷದಿಂದ ಗರಿಷ್ಠ 50 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.
ಸ್ವಾತಂತ್ರö್ಯ ಅಮೃತ ಮುನ್ನಡೆ ಕೌಶಲ್ಯಾಭಿವೃದ್ಧಿ ತರಬೇತಿ:
ನಿರುದ್ಯೋಗಿ ಯುವಜನರಿಗೆ ಐಟಿಐ, ಜಿಟಿಟಿಸಿ, ವಿಟಿಯು ಕೇಂದ್ರಗಳ ಮೂಲಕ ಉಚಿತ ಅಲ್ಪಾವಧಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ಕುಟುಂಬದಿ0ದ ಒಬ್ಬ ಸದಸ್ಯರಿಗೆ ಮಾತ್ರ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅವಕಾಶವಿದೆ.
2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದೇ ಉಳಿದಿರುವ ಅರ್ಹ ಅರ್ಜಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ; ಅವರ ಹಿಂದಿನ ಅರ್ಜಿಯನ್ನೇ ಸಮಿತಿ ಪರಿಗಣಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಬಳ್ಳಾರಿ ಜಿಲ್ಲಾ ಕಚೇರಿ ದೂ.ಸಂಖ್ಯೆ: 08392-267038 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್