
ಬಾಗಲಕೋಟೆ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ದೊಡ್ಡನಗೌಡ ಪಾಟೀಲ್ ಅವರ ಮಾತೃಶ್ರೀ ನಿಧನರಾದ ಹಿನ್ನೆಲೆಯಲ್ಲಿ, ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಇಳಕಲ್ನಲ್ಲಿ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಮಾತೃಶ್ರೀಯವರ ನಿಧನದ ಸುದ್ದಿ ತಿಳಿದು ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಇಳಕಲ್ಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ದುಃಖತಪ್ತ ಕುಟುಂಬದ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕುಟುಂಬದ ಹಿರಿಯರ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ತಾಯಿಯವರ ನಿಧನದಿಂದ ಕುಟುಂಬಕ್ಕೆ ಉಂಟಾಗಿರುವ ನೋವು ಹಾಗೂ ದುಃಖದಲ್ಲಿ ತಾವು ಸಹಭಾಗಿಯಾಗಿರುವುದಾಗಿ ಸಚಿವರು ತಿಳಿಸಿದರು. ಮೃತರು ಕುಟುಂಬಕ್ಕೆ ನೀಡಿದ ಮಾರ್ಗದರ್ಶನ, ಮೌಲ್ಯಗಳು ಹಾಗೂ ಸಂಸ್ಕಾರಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೊಡ್ಡನಗೌಡ ಪಾಟೀಲ್ ಅವರ ಕುಟುಂಬಸ್ಥರು, ಬಂಧುಗಳು, ಆಪ್ತರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande