


ಬಳ್ಳಾರಿ, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಹಾವು ಕಡಿತಕ್ಕೆ ಒಳಗಾದಾಗ ಯಾವುದೇ ಕಾರಣಕ್ಕೂ ಗಾಬರಿಯಾಗದೆ, ನಾಟಿ ವೈದ್ಯರ ಮೊರೆ ಹೋಗದೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಮೂಲಕ ಸಾವು-ನೋವುಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ ಅವರು ತಿಳಿಸಿದರು.
ನಗರದ ರೇಡಿಯೋ ಪಾರ್ಕ್ನ ಹಾಸ್ಮಿ ಶಿಕ್ಷಣ ಸಂಸ್ಥೆಯ ಶಾಲಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಘಟಕ ಹಾಗೂ ಹಾಸ್ಮಿ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಅಂತಾರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷ ಸೆಪ್ಟೆಂಬರ್ 19 ರಂದು ಅಂತಾರಾಷ್ಟಿಯ ಹಾವು ಕಡಿತ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಹಾವು ಕಡಿತದ ಅಪಾಯ, ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಹಾಗೂ ಕಡಿತದಿಂದ ಬದುಕುಳಿದವರಲ್ಲಿ ಉಂಟಾಗಬಹುದಾದ ದೀರ್ಘಕಾಲೀನ ಅಂಗವೈಕಲ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ಪ್ರಮುಖವಾಗಿ ನಾಗರಹಾವು, ಕೊಳಕುಮಂಡಲ, ಕಟ್ಟಾವು ಮತ್ತು ಗರಗಸ ಮಂಡಲ ಹಾವುಗಳು ವಿಷಪೂರಿತವಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಅಗತ್ಯ ಔಷಧಗಳು ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು.
*ಹಾವು ಕಡಿದಾಗ ಏನು ಮಾಡಬೇಕು?*
ರೋಗಿಯು ಗಾಬರಿಯಾಗಬಾರದು, ಸಮಾಧಾನವಾಗಿರಬೇಕು. ಹಾವಿನಿಂದ ನಿಧಾನವಾಗಿ ದೂರ ಸರಿಯಬೇಕು ಹಾಗೂ ಕಡಿತಕ್ಕೊಳಗಾದ ದೇಹದ ಭಾಗವನ್ನು ಅಲುಗಾಡಿಸಬಾರದು. ಕಾಲಿನ ಉಂಗುರ, ಪಾದರಕ್ಷೆ, ಬೆಲ್ಟ್, ಆಭರಣ, ವಾಚ್ ಹಾಗೂ ಬಿಗಿಯಾದ ಬಟ್ಟೆಗಳನ್ನು ತಕ್ಷಣ ತೆಗೆಯಬೇಕು. ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಡಿತಕ್ಕೊಳಗಾದ ಅಂಗವನ್ನು ನಿಶ್ಚಲವಾಗಿರಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು.
*ಏನು ಮಾಡಬಾರದು?*
ಕಡಿತಕ್ಕೊಳಗಾದ ಜಾಗಕ್ಕೆ ರಕ್ತಬಂಧಕ ಪಟ್ಟಿ (ಟೂರ್ನಿಕೆಟ್) ಅಥವಾ ಬಿಗಿಯಾದ ಬಟ್ಟೆ ಕಟ್ಟಬಾರದು. ಗಾಯವನ್ನು ಬ್ಲೇಡ್ನಿಂದ ಕೊಯ್ಯುವುದು, ಯಾವುದೇ ಲೇಪನ ಹಚ್ಚುವುದು ಮಾಡಬಾರದು. ಬಾಯಿಯಿಂದ ವಿಷವನ್ನು ಹೀರುವ ಸಾಹಸಕ್ಕೆ ಕೈಹಾಕಬಾರದು. ನಾಟಿ ಔಷಧಿ ಅಥವಾ ಇತರ ಅಸುರಕ್ಷಿತ ವಿಧಾನಗಳನ್ನು ಅವಲಂಬಿಸಬಾರದು. ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು.
ಹಾವು ಮತ್ತು ವನ್ಯಜೀವಿಗಳ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಮೀರ್ ಸೇಠ್ ಅವರು ಮಾತನಾಡಿ, ರಾತ್ರಿ ವೇಳೆ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ ಬಳಸಬೇಕು. ರೈತರು ಹೊಲದಲ್ಲಿ ಕೆಲಸ ಮಾಡುವಾಗ ಕಾಲಿಗೆ ರಕ್ಷಾ ಕವಚಗಳನ್ನು (ಗಮ್ ಬೂಟ್ಸ್) ಧರಿಸಬೇಕು. ಮನೆಯ ಅಂಗಳದಲ್ಲಿ ಅಥವಾ ನೆಲದ ಮೇಲೆ ಮಲಗದೆ ಎತ್ತರದ ಸ್ಥಳದಲ್ಲಿ ಮಲಗಬೇಕು ಹಾಗೂ ಇಲಿ-ಹೆಗ್ಗಣಗಳು ಬಾರದಂತೆ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತçಜ್ಞರಾದ ಡಾ. ವಿಶಾಲಾಕ್ಷಿ ಅವರು ಪಿಪಿಟಿ ಮೂಲಕ ವಿಶೇಷ ಉಪನ್ಯಾಸ ನೀಡಿದರು.
ಹಾಸ್ಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸೈಯದ್ ಆಸಿಫ್, ಜಿಲ್ಲಾ ಎನ್ಸಿಡಿ ಕಾರ್ಯಕ್ರಮ ಸಲಹೆಗಾರ ಡಾ. ಜಬೀನಾ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಮೈಕ್ರೋಬಯಾಲಜಿಸ್ಟ್ ಶರತ್ಬಾಬು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗೋವಿಂದಪ್ಪ, ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್