
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕೈದಿಗಳ ಪುನರ್ವಸತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿರುವ ಕರ್ನಾಟಕ ಕಾರಾಗೃಹ ಇಲಾಖೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ನವ ಸಂಕಲ್ಪ ಬೇಕರಿ’ ಆರಂಭಿಸಿದೆ.
ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ನವ ಸಂಕಲ್ಪ ಬೇಕರಿಯನ್ನು ಲೋಕಾರ್ಪಣೆ ಮಾಡಿದರು. ಇದೇ ವೇಳೆ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ಗೂ ಚಾಲನೆ ನೀಡಲಾಯಿತು.
ಹೊಸದಾಗಿ ಸಜಾ ಬಂಧನಕ್ಕೊಳಗಾದವರಿಗೆ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ನೀಡಲಾಗಿದ್ದು, ತರಬೇತಿ ಪೂರ್ಣಗೊಳಿಸಿದ ಬಂಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬೇಕರಿಯಲ್ಲಿ ತಯಾರಾಗುವ ಉತ್ಪನ್ನಗಳನ್ನು ಬೆಂಗಳೂರಿನ ವಿವಿಧ ನ್ಯಾಯಾಲಯಗಳ ಆವರಣ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬೇಕರಿ ಆನ್ ವೀಲ್ಸ್’ ಮೂಲಕ ಮಾರಾಟ ಮಾಡಲು ಇಲಾಖೆ ನಿರ್ಧರಿಸಿದೆ.
ಇದರಿಂದ ಕೈದಿಗಳಿಗೆ ಆದಾಯದ ಮೂಲ ಕಲ್ಪಿಸುವುದರ ಜೊತೆಗೆ, ಬಿಡುಗಡೆಯ ನಂತರವೂ ಕೌಶಲ್ಯವನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ.‘ಕೈದಿಗಳಿಗೆ ಶಿಕ್ಷೆಯ ಜತೆಗೆ ಅವರ ಪುನರ್ವಸತಿ ಹಾಗೂ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.
ತರಬೇತಿ ಮತ್ತು ಉದ್ಯೋಗದ ಅವಕಾಶಗಳ ಮೂಲಕ ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ಸಹಕಾರಿಯಾಗಲಿದೆ’ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2026ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿಯೂ ಕೈದಿಗಳು ತಯಾರಿಸಿದ ತಿಂಡಿ-ತಿನಿಸುಗಳನ್ನು ರಾಜ್ಯಪಾಲರು ಸೇರಿದಂತೆ ಗಣ್ಯರಿಗೆ ಉಪಹಾರವಾಗಿ ನೀಡಲಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R